ತಿಕೋಟಾ: ‘ಭೂಮಿಯ ಮೇಲಿರುವ ಎಲ್ಲರನ್ನು ಕಾಪಾಡುವುದು ಧರ್ಮ. ಆ ಧರ್ಮವನ್ನು ಉಳಿಸಬೇಕು. ನಾಲ್ಕೂ ದಿಕ್ಕಿನಲ್ಲೂ ಅದನ್ನು ಪಸರಿಸಬೇಕು’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಹೇಳಿದರು.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸೇವಾ ಸಂಸ್ಥೆಯ ಉದ್ಘಾಟನೆ, ಅಡ್ಡಪಲ್ಲಕಿ ಉತ್ಸವ, ಕುಂಭಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಹಿಂದೂ ಧರ್ಮದ ಅವಿಭಾಜ್ಯ ಅಂಗ. ಅದಕ್ಕಾಗಿ ಈ ಧರ್ಮವನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು’ ಎಂದು ಹೇಳಿದರು.
‘ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲು ವ್ಯಕ್ತಿಯ ದುಡಿಮೆಯ ಶೇ 20 ರಷ್ಟು ಹಣವನ್ನು ಪ್ರತಿ ತಿಂಗಳು ತಂದೆ ತಾಯಿಯ ಹೆಸರಿನಲ್ಲಿ ಅವರ ಖಾತೆಗೆ ಜಮೆ ಮಾಡುವ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು’ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಧರ್ಮವನ್ನು ರಕ್ಷಣೆ ಮಾಡುವ ಪವಿತ್ರ ಕಾರ್ಯಕ್ರಮ ಇದಾಗಿದ್ದು, ಧರ್ಮ ಉಳಿದರೆ ದೇಶ ಉಳಿಯುತ್ತದೆ. ಇಡೀ ದೇಶದಲ್ಲಿ ಹಿಂದೂ ಸಂಸ್ಕೃತಿ ಶ್ರೇಷ್ಠವಾದುದು. ವೀರಶೈವ ಲಿಂಗಾಯತ ಧರ್ಮ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇಡೀ ಮಾನವ ಕುಲವನ್ನು ಪ್ರೀತಿಸುವ ಧರ್ಮವೇ ವೀರಶೈವ ಲಿಂಗಾಯತ ಧರ್ಮ’ ಎಂದು ಹೇಳಿದರು.
ತರಿಕೇರಿ ಚರವರಣ್ಯ ಸೋಮಶಂಕರ ಸ್ವಾಮೀಜಿ, ಬಾಬಾನಗರದ ಷಣ್ಮುಖ ಶಿವಾಚಾರ್ಯರು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಬಬಲೇಶ್ವರದ ಮಹಾದೇವ ಶಿವಾಚಾರ್ಯರು, ತಿಕೋಟಾದ ಅಭಿನವ ಶಿವಬಸವ ಶಿವಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ಬಸಯ್ಯ ಹಿರೇಮಠ, ನರೇಂದ್ರ ಬಣ್ಣದ, ವಿಜಯಕುಮಾರ ಮಠಪತಿ, ಮಂಜುನಾಥ ಹಿರೇಮಠ, ಬಸವರಜ ಲೋಣಿ, ಈಶ್ವರಪ್ಪ ಹಾದಿಮನಿ, ಶಂಕರಗುರು ಮಠಪತಿ ಇದ್ದರು.
ಚಂದ್ರಶೇಖರಯ್ಯ ಹಿರೇಮಠ ಸ್ವಾಗತಿಸಿ, ಪೀರಗೊಂಡ ಗದ್ಯಾಳ ನಿರೂಪಿಸಿದರು. ಶಶಿಕಾಂತ ಗದ್ಯಾಳ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.