ADVERTISEMENT

‘ಆತ್ಮ ನಿರ್ಭರ ಭಾರತ’ ನಿರ್ಮಾಣಕ್ಕೆ ಶ್ರಮಿಸಿ

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ನೆ.ಲಾ. ನರೇಂದ್ರ ಬಾಬು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 14:14 IST
Last Updated 7 ಜನವರಿ 2021, 14:14 IST
ವಿಜಯಪುರದಲ್ಲಿ ಗುರುವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ನೆ.ಲಾ. ನರೇಂದ್ರಬಾಬು ಉದ್ಘಾಟಿಸಿದರು. ಆರ್.ಎಸ್. ಪಾಟೀಲ ಕೂಚಬಾಳ, ಸಾಬು ಮಾಶ್ಯಾಳ ಇದ್ದಾರೆ
ವಿಜಯಪುರದಲ್ಲಿ ಗುರುವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ನೆ.ಲಾ. ನರೇಂದ್ರಬಾಬು ಉದ್ಘಾಟಿಸಿದರು. ಆರ್.ಎಸ್. ಪಾಟೀಲ ಕೂಚಬಾಳ, ಸಾಬು ಮಾಶ್ಯಾಳ ಇದ್ದಾರೆ   

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಆತ್ಮ ನಿರ್ಭರ ಭಾರತ’ ನಿರ್ಮಾಣಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದುಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ನೆ.ಲಾ. ನರೇಂದ್ರ ಬಾಬು ಹೇಳಿದರು.

ನಗರದ ರಾಜ ರಾಜೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲತ್ತುಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ADVERTISEMENT

ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಒಂದು ದಿನ ವಾಸ್ತವ್ಯ ಮಾಡಿದ್ದೇನೆ. ಕಾರ್ಯಕರ್ತರ ಮನೆ, ಮನೆಗೆ ಭೇಟಿಯಾಗಿ ಬಂದಿದ್ದೇನೆ. ಸರ್ಕಾರದ ಯೋಜನೆ, ಸೌಲಭ್ಯದ ಕುರಿತು ಹಿಂದುಳಿದ ವರ್ಗದ ಜನರಿಗೆ ಮಾಹಿತಿ ನೀಡಿದ್ದೇನೆ. ಇದೇ ರೀತಿ ಪಕ್ಷದ ಕಾರ್ಯಕರ್ತರು ಅವರವರ ಕೆಲಸ ಮಾಡಬೇಕು ಎಂದರು.

ಪಕ್ಷದಲ್ಲಿ ಎಲ್ಲ ವರ್ಗದವರನ್ನು ಸರಿಸಮಾನವನ್ನಾಗಿ ತೆಗೆದುಕೊಂಡು ಹೋಗಬೇಕು. ತಳಮಟ್ಟದಿಂದ ಸಂಘಟನೆ ಗಟ್ಟಿಯಾದಾಗ ಎಲ್ಲ ವಿಭಾಗದಲ್ಲಿಯೂ ಯಶಸ್ಸು ಸಾಧಿಸಬಹುದು. ಕಾರ್ಯಕರ್ತರ ಶ್ರಮದ ಫಲವಾಗಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರ ಸೌಲಭ್ಯ ದೊರಕಬೇಕು ಎಂದು ಹೇಳಿದರು.

ಹಿಂದುಳಿದ ವರ್ಗದವರಿಗೆ ಕುಲ ಕಸುಬು ಮೂಲವಾಗಿದ್ದು, ಅತಿ ಹೆಚ್ಚು ಜನ ಅಸಂಘಟಿತ ವಲಯದಲ್ಲಿ ಇದ್ದಾರೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸರ್ಕಾರದ ಸವಲತ್ತುಗಳನ್ನು ಕೊಡಿಸಬೇಕು ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಕಾರ್ಯಕರ್ತರು ಪಕ್ಷದ ಕಾರ್ಯಕ್ರಮ, ಸಭೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲ ವರ್ಗದವರ ಏಳಿಗೆಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ವಿ.ಡಿ.ಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸಾಬು ಮಾಶ್ಯಾಳ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ,ಪ್ರಮೋದ ಬಡಿಗೇರ, ಶಂಕರ ಕುಂಬಾರ,ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗುರ ವಿಜಯ ಜೋಶಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.