ಇಂಡಿ: ಹಿಂಗಾರು ಹಂಗಾಮಿನಲ್ಲಿ ಹಸಿರು ಅಥವಾ ಕೆಂಪು ಮೆಣಸಿನಕಾಯಿಗೆ ಥ್ರಿಪ್ಸ್ ನುಶಿಯ ಕಾಟ ತಗುಲುತ್ತಿದ್ದು, ರೈತರು ಕೀಟನಾಶಕ ಉಪಯೋಗಿಸಿ ನಿಯಂತ್ರಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ.ಪ್ರಕಾಶ ಹೇಳಿದರು.
ತಾಲ್ಲೂಕಿನ ಪುರಸಭೆ ಆಧೀನದಲ್ಲಿರುವ ಸಾತಪುರ ಗ್ರಾಮದ ನಿಂಗಪ್ಪ ರೂಗಿ ಅವರ ತೋಟದಲ್ಲಿ ಗುರುವಾರ ಹಸಿರು ಮೆಣಸಿನಕಾಯಿ ತೋಟ ವೀಕ್ಷಿಸಿ ಮಾತನಾಡಿದ ಅವರು, ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ, ಹೂಗಳ ಒಳಗೆ ಮತ್ತು ಹೊರಗೆ ಕಂಡು ಬರುತ್ತವೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೀಣಾ ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ ಬಾಧಿತ ಎಲೆಯ ಕುಡಿಗಳನ್ನು ಕತ್ತರಿಸಿ ನಾಶಪಡಿಸುವುದು, ಇಲ್ಲವೆ ಪ್ರತಿ ಎಕರೆಗೆ 25-30 ನೀಲಿ ಅಂಟು ಬಲೆಗಳನ್ನು ಮೆಣಸಿನಕಾಯಿ ಬೆಳೆಯಲ್ಲಿ ನೇತು ಹಾಕಿ ಕೀಟಗಳನ್ನು ಆಕರ್ಷಿಸಿ ನಾಶಪಡಿಸಬಹುದು, ಇಲ್ಲವೆ ಸಾವಯುವ ಕ್ರಮವಾಗಿ ಬೇವಿನ ಬೀಜದ ಕಷಾಯ ಶೇ 5 ಅಥವಾ ಶೇ 3 ರ ಬೇವಿನ ಎಣ್ಣೆ ಪ್ರತಿ ಲೀಟರ್ ನೀರಿಗೆ 2 ಮೀ.ಲೀ ನಂತೆ ಬೆರೆಸಿ ಸಿಂಪಡಿಸಬಹುದು ಎಂದು ತಿಳಿಸಿದರು.
ರೈತರಾದ ನಿಂಗಪ್ಪ ರೂಗಿ, ಶಿವಪ್ಪ ಕಟ್ಟಿಮನಿ, ಸಿದ್ರಾಮ ರೂಗಿ, ಮಾಳಪ್ಪ ಗುಡ್ಲ, ಕಾಳಪ್ಪ ರೂಗಿ, ಶರಣಪ್ಪ ರೂಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.