ADVERTISEMENT

ವಿಜಯಪುರ | ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 17:45 IST
Last Updated 11 ಡಿಸೆಂಬರ್ 2025, 17:45 IST
ಚನ್ನಬಸವ ಸ್ವಾಮೀಜಿ
ಚನ್ನಬಸವ ಸ್ವಾಮೀಜಿ   

ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕರಾಗಿದ್ದ ಚನ್ನಬಸವ ಸ್ವಾಮೀಜಿ (94) ಗುರುವಾರ ಶ್ರೀಮಠದಲ್ಲಿ ನಿಧನರಾದರು.

ಸ್ವಾಮೀಜಿಯವರ ಅಂತಿಮ ಧಾರ್ಮಿಕ ವಿಧಿ ವಿಧಾನವು ಶುಕ್ರವಾರ (ಡಿ. 12) ನೆರವೇರಲಿದ್ದು, ಮಧ್ಯಾಹ್ನ 2 ಗಂಟೆಗೆ ವಚನಶಿಲಾ ಮಂಟಪದಲ್ಲಿ ಕ್ರಿಯಾ ಸಮಾಧಿ ಮಾಡಲಾಗುವುದು ಎಂದು  ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ವಚನಶಿಲಾ ಮಂಟಪದ ಸ್ಥಾಪಕ:

ADVERTISEMENT

ಬಸವಣ್ಣನವರ ತಾಯಿ ತವರೂರು ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ ಚನ್ನಬಸವ ಸ್ವಾಮೀಜಿಯವರು ವಚನ ಶಿಲಾಮಂಟಪ ನಿರ್ಮಿಸಿದ್ದಾರೆ. ಕಲ್ಲಿನಲ್ಲಿ ಬರೆದ ವಚನಗಳು ಶಾಶ್ವತವಾಗಿ ಉಳಿದು, ಓದಲು ಸಾಧ್ಯವಾಗುವಂತೆ ಮಾಡಿದ್ದಾರೆ. ಬಸವಣ್ಣನವರ 1,300 ವಚನಗಳು ಸೇರಿ 1,700ಕ್ಕೂ ಅಧಿಕ ಬಸವಾದಿ ಶರಣರ ವಚನಗಳನ್ನು ಶಿಲೆಗಳಲ್ಲಿ ಕೆತ್ತಿಸಿದ್ದಾರೆ. ಚನ್ನಬಸವ ಸ್ವಾಮೀಜಿ ಅವರು ಜೋಳಿಗೆ ಹಿಡಿದು ನಾಡಿನಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿ, ಸಂಗ್ರಹವಾದ ಹಣದಲ್ಲಿ ಈ ಮಹತ್ಕಾರ್ಯ ನೆರವೇರಿಸಿದ್ದಾರೆ. ಇದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. 

ಸ್ವಾಮೀಜಿ ಅವರು 37 ವರ್ಷ ಪಾದಯಾತ್ರೆ ಮೂಲಕವೇ ಕಾಶಿ, ರಾಮೇಶ್ವರ, ಕೇದಾರನಾಥ, ಯಡಿಯೂರು, ಅಥಣಿ ಹೀಗೆ ನಾನಾ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ್ದಾರೆ. 32 ವರ್ಷ ಯುಗಾದಿ ವೇಳೆ ಪ್ರತಿ ವರ್ಷ ಉಳವಿಗೆ ಪಾದಯಾತ್ರೆ ತೆರಳಿ ಕ್ಷೇತ್ರ ದರ್ಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.