ಇಂಡಿ: ಇಂಡಿ, ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ಮತ್ತು ಚಡಚಣ ತಾಲ್ಲೂಕುಗಳಲ್ಲಿ ಸಂಭವಿಸಿರುವ ರೈತ ಆತ್ಮಹತ್ಯೆ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಿ ಅವರಿಗೆ ಪರಿಹಾರ ಒದಗಿಸಬೇಕೆಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಕಂದಾಯ ಉಪವಿಬಾಗಾಧಿಕಾರಿ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ರೈತಆತ್ಮಹತ್ಯೆಗಳ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರ ಆತ್ಮಹತ್ಯೆ ನಡೆದರೆ ಬೇಗ ದಾಖಲೆ ಪಡೆದು ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ರೈತರ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಪೊಲೀಸ್ ಇಲಾಖೆಯು 15 ದಿವಸದ ಒಳಗಾಗಿ ಕಂದಾಯ ಇಲಾಖೆಗೆ ತಲುಪಿಸಬೇಕು ಎಂದು ಹೇಳಿದರು.
ರೈತರ ಆತ್ಮಹತ್ಯೆಯಾದರೆ ₹ 5 ಲಕ್ಷ ಪರಿಹಾರ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಆಕಸ್ಮಿಕ ಮರಣ ಹೊಂದಿದರೆ ₹ 2 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದರು.
ಇಂಡಿಯ ನಾಲ್ಕು ಸೇರಿದಂತೆ ಒಟ್ಟು 9 ಆತ್ಮಹತ್ಯೆ ಪ್ರಕರಣಗಳನ್ನು ಬುಧವಾರ ಇತ್ಯರ್ಥ ಪಡಿಸಲಾಯಿತು.
ಅದಲ್ಲದೆ ಹಾವು ಕಡಿದು ಮರಣ ಹೊಂದಿದ ಎರಡು, ರೈತರ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ ಮರಣ ಹೊಂದಿದ 2 ಪ್ರಕರಣ ಇತ್ಯರ್ಥ ಪಡಿಸಲಾಯಿತು.
ಸಭೆಯಲ್ಲಿ ಡಿ.ವೈ.ಎಸ್.ಪಿ ಜಗದೀಶ ಎಚ್.ಎಸ್, ಇಂಡಿಯ ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಸಿಂದಗಿಯ ಎಚ್.ವೈ.ಸಿಂಗಾಗೋಳ, ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ, ಸಿಂದಗಿಯ ಪ್ರದೀಪ ಹಿರೇಮಠ, ದೇವರ ಹಿಪ್ಪರಗಿಯ ಪ್ರಕಾಶ ಸಿಂದಗಿ, ಆಲಮೇಲದ ಸುರೇಶ ಚಾವಲಾರ, ಇಂಡಿಯ ಗ್ರೇಡ್ 2 ತಹಶೀಲ್ದಾರ್ ಧನಪಾಲಶೆಟ್ಟಿ ದೇವೂರ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.