
ವಿಜಯಪುರ: ಖಾಸಗಿ–ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ)ದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಬಂಧನಕ್ಕೆ ಒಳಗಾಗಿ 14 ದಿನಗಳಿಂದ ಸೆರೆವಾಸ ಅನುಭವಿಸಿದ್ದ ಆರು ಜನ ಹೋರಾಟಗಾರರು ಬುಧವಾರ ಜೈಲಿನಿಂದ ಬಿಡುಗಡೆಯಾದರು.
ಹೋರಾಟಗಾರರಾದ ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಬಿ.ಭಗವಾನ್ರೆಡ್ಡಿ, ಭೋಗೇಶ ಸೋಲಾಪುರ, ಸಿದ್ದರಾಮ ಹಳ್ಳೂರ ಹಾಗೂ ಹುಳಶ್ಯಾಳದ ಸಂಗನ ಬಸವ ಸ್ವಾಮೀಜಿ ಅವರು ಸಂಜೆ 7.30ಕ್ಕೆ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹ(ದರ್ಗಾ ಜೈಲ್)ದಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕುಟುಂಬದವರು, ಬಂಧುಗಳು, ಸ್ನೇಹಿತರು, ಹಿತೈಷಿಗಳು ಹೂವಿನ ಹಾರ ಹಾಕಿ ಅಭಿನಂದಿಸಿದರು. ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಜೈಲಿನ ಮುಂಭಾಗದಲ್ಲಿ ಗುಂಪುಗೂಡಿದ್ದ ನೂರಾರು ಜನರು ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಕ್ಕೆ ಜಯವಾಗಲಿ’, ‘ಹೋರಾಟಗಾರರಿಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ತೆರೆದ ವಾಹನಗಳಲ್ಲಿ ಹೋರಾಟಗಾರರನ್ನು ಮೆರವಣಿಗೆ ಮೂಲಕ ನಗರದ ವಾಟರ್ ಟ್ಯಾಂಕ್ ಸರ್ಕಲ್, ಶಿವಾಜಿ ಸರ್ಕಲ್, ಗಾಂಧಿ ಚೌಕಿ, ಬಸವೇಶ್ವರ ಚೌಕಿ ಮೂಲಕ ಸಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿದರು. ಹತ್ತಾರು ವಾಹನಗಳು ಮೆರವಣಿಗೆಯಲ್ಲಿ ಸಾಲಾಗಿ ಸಾಗಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ವೀಕ್ಷಿಸಿ, ಹೋರಾಟಗಾರರನ್ನು ಅಭಿನಂದಿಸಿದರು.
ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಪತ್ರಕರ್ತರೊಂದಿಗೆ ಮಾತನಾಡಿದ ಹೋರಾಟಗಾರ, ಹಿರಿಯ ಪತ್ರಕರ್ತ ಅನಿಲ ಹೊಸಮನಿ, ‘ಇದು ಜನರ ಗೆಲುವು, ಈ ಹೋರಾಟದ ಫಲವಾಗಿ ವಿಜಯಪುರ ಅಷ್ಟೇ ಅಲ್ಲದೇ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಡಲು ಮುಂದಾಗಿರುವುದು ಹೋರಾಟಕ್ಕೆ ದೊಡ್ಡ ಜಯ ತಂದುಕೊಟ್ಟಿದೆ’ ಎಂದರು.
‘ಕೊನೆಗೂ ರಾಜ್ಯ ಸರ್ಕಾರ ಪಿಪಿಪಿ ಕೈಬಿಟ್ಟು, ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರ ಪ್ರಕಟಿಸಿರುವುದು ಸಂತೋಷ ತಂದಿದೆ. ಜೈಲಿನಲ್ಲಿ ಸಚಿವ ಶಿವಾನಂದ ಪಾಟೀಲರು ಭೇಟಿಯಾಗಿ ಮುಂಬರುವ ಬಜೆಟ್ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಸಹ ಈ ವಿಷಯವಾಗಿ ಸ್ಪಂದಿಸಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದ್ದಾರೆ. ಇದು ಜನರ ಗೆಲುವು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಯಂಡಿಗೇರಿ, ಎಂ.ಸಿ. ಮುಲ್ಲಾ, ಅಕ್ರಂ ಮಾಶ್ಯಾಳಕರ, ಎಚ್.ಟಿ. ಭರತಕುಮಾರ, ಎಚ್.ಟಿ. ಮಲ್ಲಿಕಾರ್ಜುನ, ಸುರೇಖಾ ರಜಪೂತ, ಲಲಿತಾ ಬಿಜ್ಜರಗಿ, ಬಾಬುರಾವ್ ಬೀರಕಬ್ಬಿ, ಸುರೇಶ ಜೀಬಿ, ವಿನೋದ ಖೇಡ, ಸುರೇಶ ಬಿಜಾಪುರ, ಮಲ್ಲಿಕಾರ್ಜುನ ಬಟಗಿ, ಜಗದೇವ ಸೂರ್ಯವಂಶಿ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಗೀತಾ ಎಚ್., ಸಿದ್ರಾಮ ಹಳ್ಳೂರ, ಎಸ್. ಎಂ.ಗುರಿಕಾರ, ಶ್ರೀಕಾಂತ ಕೊಂಡಗೂಳಿ, ಸಿ.ಬಿ. ಪಾಟೀಲ, ಸುಶೀಲ ಮಿಣಜಗಿ, ಜ್ಯೋತಿ ಮಿಣಜಗಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್, ಶಿವರಂಜನಿ, ಕಾವೇರಿ ರಜಪೂತ, ನೀಲಾಂಬಿಕಾ ಬಿರಾದಾರ, ಬಾಳು ಜೇವೂರ, ಸಲೀಂ ಹೊಕ್ರಾಣಿ, ಅಶೋಕ ವಾಲಿಕಾರ, ಸುಶೀಲಾ ಮಿಣಜಗಿ, ಚಂದ್ರಶೇಖರ ಬಗಲಿ, ಸುಭಾಸ ಹೊನ್ನಕಟ್ಟಿ, ಸಲೀಂ ಹೊಕ್ರಾಣಿ, ಸುರೇಶ ಬಿರಾದಾರ, ಜಬೀನ ಅಥಣಿ, ಲಾಯಪ್ಪ ಇಂಗಳೆ, ಪ್ರಕಾಶ ಸಬರದ, ನೀಲಾಂಬಿಕಾ ಬಿರಾದಾರ, ಸುರೇಶ ಪಾಟೀಲ, ಜ್ಯೋತಿ ಮಿಣಜಗಿ, ದಸ್ತಗಿರ ಉಕ್ಕಲಿ, ಪ್ರಕಾಶ ಬಗಲಿ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.