ವಿಜಯಪುರ: ‘₹2500 ಕೋಟಿಗೆಮುಖ್ಯಮಂತ್ರಿ ಹುದ್ದೆ ಆಫರ್ ಬಂದಿತ್ತು’ ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಹೈಕೋರ್ಟ್ನಲ್ಲಿ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಯಾಸೀನ್ ಜವಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅಥವಾ ಗೃಹ ಸಚಿವ ಅಮಿತ್ ಶಾ ಅಥವಾ ಪ್ರಧಾನಿ ನರೇಂದ್ರ ಮೋದಿ ಅಥವಾ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಯಾರು ಹಣ ಕೇಳಿದ್ದರು ಎಂಬುದು ಸ್ಪಷ್ಟವಾಗಬೇಕಿದೆ ಎಂದು ಅವರು ಹೇಳಿದರು.
‘ಮುಸ್ಲಿಮರು ಹೆಚ್ಚಿರುವ ವಿಜಯಪುರ ನಗರ ಕ್ಷೇತ್ರದ ಚುನಾವಣೆಯಲ್ಲಿ ನಾನು ಆಯ್ಕೆಯಾಗಿ ಬಂದಿರುವುದು ಪಾಕಿಸ್ತಾನದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದೆನಿಸುತ್ತದೆ’ ಎಂಬ ದೇಶ ವಿರೋಧಿ ಹೇಳಿಕೆ ನೀಡಿರುವ ಯತ್ನಾಳ ವಿರುದ್ಧ ಇದುವರೆಗೂ ಪೊಲೀಸರ ದೂರು ದಾಖಲಿಸಿಕೊಂಡಿಲ್ಲ. ಯತ್ನಾಳ ಯಾವ ಕ್ಷೇತ್ರದ ಶಾಸಕರು? ಎಂಬ ಕುರಿತು ತನಿಖೆ ನಡೆಸುವಂತೆಯೂ ಹೈಕೋರ್ಟ್ನಲ್ಲಿ ಎಫ್ಐಆರ್ ದಾಖಲಿಸುವುದಾಗಿ ತಿಳಿಸಿದರು.
ವಿಜಯಪುರ ಬಸವಣ್ಣ, ಆದಿಲ್ ಶಾಹಿ ನಾಡೇ ಹೊರತು ಪಾಕಿಸ್ತಾನವಲ್ಲ. ನಮ್ಮ ದೇಶದ ಒಬ್ಬ ಜನಪ್ರತಿನಿಧಿಯಾಗಿದ್ದುಕೊಂಡುಪದೇ ಪದೇ ಅನಗತ್ಯವಾಗಿಪಾಕಿಸ್ತಾನ ಹೆಸರು ಬಳಸುವ ಮೂಲಕ ದೇಶ ವಿರೋಧಿ ನಿಲುವು ಅನುಸರಿಸುತ್ತಿರುವ ಯತ್ನಾಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಯತ್ನಾಳ ಅವರ ಹೇಳಿಕೆಗಳಿಂದ ಬಿಜೆಪಿಗೆ ದೊಡ್ಡ ಹಾನಿಯಾಗುತ್ತಿದೆ. ಪಕ್ಷದ ವರಿಷ್ಠರು ಅವರ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.