ಯಾದಗಿರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ರಾಜ್ಯದ ನೈಸರ್ಗಿಕ ಸಂಪತ್ತನ್ನು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಮತ್ತು ತೆರಿಗೆ ಪಾವತಿಸದೇ ಹಾಡಹಗಲೇ ಲೂಟಿ ಮಾಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಸ್ಥಳದಲ್ಲೇ ಮರಳು ತೆಗೆಯಬೇಕೆನ್ನುವ ನಿಯಮವಿದ್ದರೂ ಅದನ್ನು ಪಾಲಿಸದೇ ಕೆಲ ಖಾಸಗಿ ಕಂಪನಿಗಳು ರಾಜಾರೋಷವಾಗಿ ಅಕ್ರಮವಾಗಿ ಮರಳನ್ನು ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಾಗಿಸುತ್ತಿವೆ’ ಎಂದು ಅವರು ಆರೋಪಿಸಿದರು.
‘ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುತ್ತಿರುವಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಡೆದು ದಂಡ ವಸೂಲಿ ಮಾಡುತ್ತಾರೆ. ಬಂದಳ್ಳಿ ಗ್ರಾಮದಲ್ಲಿ ಜವಳಿ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಗೆ ಎಗ್ಗಿಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ಇಲಾಖೆಯ ಕೆಲ ಅಧಿಕಾರಿಗಳು ನೇರವಾಗಿ ಶಾಮೀಲಾಗಿರುವುದರಿಂದ ದಂಧೆ ಅವ್ಯಾಹತವಾಗಿದೆ. ಕೂಡಲೇ ಜಿಲ್ಲಾಧಿಕಾರಿ ಅಕ್ರಮ ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಶಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.
ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿದ್ದುನಾಯಕ ಹತ್ತಿಕುಣಿ, ಅರ್ಜುನ ಪವಾರ, ದೀಲಿಪ್ ಸೈದಾಪುರ, ಸಿದ್ದಪ್ಪ ಕ್ಯಾಸಪನಹಳ್ಳಿ, ನಾಗರಾಜ ಶೆಟ್ಟಿಗೇರಾ, ಸಿದ್ದು ಸಾಹುಕಾರ, ಮಹೇಶ ಠಾಣಗುಂದಿ, ಮಲ್ಲು ಹಾಲಗೇರಾ, ಮಂಜು ಅರಿಕೇರಾ, ಮಲ್ಲು ರಾಮಸಮುದ್ರ, ಚಂದ್ರು ಗೋಪಾಳಪೂರ, ನಾರಾಯಣ ಗೋಪಾಳಪೂರ, ಈಶಪ್ಪ ಠಾಣಗುಂದಿ,
ರವಿ ಬಂದಳ್ಳಿ, ಬಸ್ಸು ರಾಮಸಮುದ್ರ, ಹಣಮೇಶ ವಡ್ಡನಹಳ್ಳಿ, ಮೌನೇಶ ಯಡ್ಡಳ್ಳಿ, ಹರೀಶ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.