ADVERTISEMENT

ಆಯುಷ್ ನಿಂದ ಉತ್ತಮ ಕೆಲಸ: ಸಿದ್ದನಗೌಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:31 IST
Last Updated 23 ಸೆಪ್ಟೆಂಬರ್ 2013, 9:31 IST

ಕೆಂಭಾವಿ: ಗ್ರಾಮೀಣ ಪ್ರದೇಶದಲ್ಲಿ ಆಯುಷ್ ಇಲಾಖೆ ಉತ್ತಮ ಕೆಲಸ­ಗಳನ್ನು ಮಾಡುತ್ತಿದ್ದು, ಗ್ರಾಮೀಣ ಜನರ ಸಮಸ್ಯೆ ಹಾಗೂ ರೋಗಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿ­ಕೊಳ್ಳು­ತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಸಿದ್ದನಗೌಡ ಪೊಲೀಸ್‌ ಪಾಟೀಲ ಹೇಳಿದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಉಚಿತ ಹಿಮೊ­ಗ್ಲೊಬಿನ್, ರಕ್ತದ ಗುಂಪು ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

ಇತಿಹಾಸ ಮರುಕಳಿಸುತ್ತದೆ ಎಂಬಂತೆ ಮತ್ತೆ ನಮ್ಮ ಪುರಾತನ ಕಾಲದ ಆಯುರ್ವೇದ ಚಿಕಿತ್ಸೆಯತ್ತ ಜನ ವಾಲಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಆಯುಷ್ ಇಲಾಖೆಯ ಮೂಲಕ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು. ಯಡಿಯಾಪುರ ಸರ್ಕಾರಿ ಹೋಮಿಯೋಪಥಿ ಚಿಕಿತ್ಸಾ­ಲಯ­ದ ನೂತನ ಕಟ್ಟಡಕ್ಕೆ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದರು.

ಪ್ರಭಾರ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಪ್ರಕಾಶ ರಾಜಾಪುರ ಮಾತನಾಡಿ, ದ್ವಿದಳ ಧಾನ್ಯ, ಹಸಿ ತರಕಾರಿ ಬಳಸುವುದರಿಂದ ಹಿಮೊಗ್ಲೊಬಿನ್ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.

ಡಾ. ರಕ್ಷಿತಾ ನ್ಯಾಮಗೊಂಡ ಮಾತನಾಡಿ, ಅಂಗಡಿಗಳಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ಉಂಟಾಗುತ್ತದೆ, ಬೇಕರಿ ತಿನಿಸುಗಳು ದೇಹಕ್ಕೆ ಒಳ್ಳೆಯದಲ್ಲ, ಮನೆಯಲ್ಲಿ ತಯಾರಿಸಿದ ಊಟ ಸೇವಿಸಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಬಾಬು ದೇವರಮನಿ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ಪಂಚಾಯತಿ ಸದಸ್ಯ ಖಾಜಾಪಟೇಲ ಕಾಚೂರ, ಡಾ.ಶಂಕರಗೌಡ ಮೂಲಿ­ಮನಿ, ಡಾ. ಅಯ್ಯನಗೌಡ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಪ್ರಾಂಶು­ಪಾಲ ನಾಗರಡ್ಡು ಗುಂಡಕ­ನಾಳ. ರಂಗಪ್ಪ ವಡ್ಡರ ವೇದಿಕೆಯಲ್ಲಿದ್ದರು.

ಶರಣಬಸಪ್ಪ ಸಜ್ಜನ ನಿರೂಪಿಸಿದರು, ಡಾ.ಮೀರಾ ಜೋಶಿ ಸ್ವಾಗತಿಸಿದರು, ಸಂತೋಷ ವಂದಿಸಿದರು. 200 ವಿದ್ಯಾರ್ಥಿಗಳಿಗೆ ರಕ್ತದ ಗುಂಪಿನ ಕಾರ್ಡ್‌­ಗಳನ್ನು ವಿತರಿಸಲಾಯಿತು. ರಕ್ತ ತಪಾಸಣೆ ಮಾಡಿ, ಉಚಿತ ಚಿಕಿತ್ಸೆ ನೀಡಲಾಯಿತು. ಡಾ. ಸಂಜಯ ಕುಲ­ಕರ್ಣಿ, ಡಾ. ಹಣಮಂತ, ಡಾ. ಆರ್ ಸರಾಫ, ಡಾ. ಪ್ರೇಮಾ ರಾಜಾಪುರ, ಡಾ.ಮೀರಾ ಜೋಷಿ ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.