ಶಹಾಪುರ: ‘ನಗರದ ಎಸ್ಬಿಐ ಬ್ಯಾಂಕಿನ ಮುಂದೆ ಚರಂಡಿ ಬಾಯಿ ತೆರೆದು ನಿಂತಿದೆ. ಬ್ಯಾಂಕಿನ ವ್ಯವಹಾರಕ್ಕೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ಆತಂಕದಲ್ಲಿ ಬರುವ ದುಃಸ್ಥಿತಿ ಇದೆ’ ಎಂದು ರೈತ ಮುಖಂಡ ಅಮರೇಶ ನಾಯಕ ಇಟಗಿ ಆರೋಪಿಸಿದ್ದಾರೆ.
‘ಬೀದರ್– ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡಿರುವ ಚರಂಡಿ ತುಸು ದೂರದಲ್ಲಿ ಸ್ಲ್ಯಾಬ್ ಹಾಕಲಾಗಿದೆ. ಆದರೆ, ಬ್ಯಾಂಕಿನ ಮುಂದುಗಡೆ ರಕ್ಷಣೆಯ ಕ್ರಮ ತೆಗೆದುಕೊಂಡಿಲ್ಲ. ತುಸು ನಿಷ್ಕಾಳಜಿ ವಹಿಸಿದರೆ ಚರಂಡಿಯಲ್ಲಿ ಬೀಳಬಹುದು.
ಅಲ್ಲದೆ, ಚರಂಡಿಯ ದುರ್ವಾಸನೆ ಇಡೀ ಬ್ಯಾಂಕಿನ ತುಂಬಾ ವ್ಯಾಪಿಸಿದೆ. ನಗರಸಭೆಯ ಪೌರಾಯುಕ್ತರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಒಂದು ವಾರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸದಿದ್ದರೆ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.