ADVERTISEMENT

ಐತಿಹಾಸಿಕ ಸ್ಮಾರಕಗಳ ಅಭಿಯಾನ ಅಗತ್ಯ: ಮುಡಬಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:40 IST
Last Updated 15 ಅಕ್ಟೋಬರ್ 2012, 8:40 IST

ಶಹಾಬಾದ: `ಸ್ಮಾರಕಗಳು ನಾಡಿನ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ತಾಣಗಳಾಗಿವೆ. ಅವನ್ನು ಉಳಿಸುವ ಕೆಲಸ ಕೇವಲ ಸರ್ಕಾರದಿಂದ ಮಾತ್ರವಲ್ಲ ಜನರಿಂದಲೂ ಮಾಡುವ ಅವಶ್ಯಕತೆ ಇದೆ~ ಎಂದು ಐತಿಹಾಸಿಕ ಸ್ಥಳಗಳ ಸಂಶೋಧಕ ಮುಡಬಿ ಗುಂಡೆರಾವ್ ಕರೆ ನೀಡಿದರು.

ನೃಪತುಂಗ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಶನಿವಾರ ಹೊನಗುಂಟಿ ಗ್ರಾಮದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ `ಚಿತ್ತಾಪುರ ತಾಲ್ಲೂಕು ನಿರ್ಲಕ್ಷಿತ ಐತಿಹಾಸಿಕ ಸ್ಮಾರಕಗಳು~ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

`ಚಿತ್ತಾಪುರ ತಾಲ್ಲೂಕಿನಲ್ಲಿ ನಾಗಾವಿ, ಮರತೂರ, ಸನ್ನತ್ತಿ, ಟೆಂಗಳಿ, ಅಲ್ಲೂರ(ಬಿ), ಕಾಳಗಿ, ಭಂಕೂರ, ಹೊನಗುಂಟಿ, ನಾಲವಾರ, ಕುನ್ನೂರ, ಸೂಗೂರ, ಹಲಕರ್ಟಿ, ತೊನಸನಹಳ್ಳಿ ಸೇರಿದಂತೆ ಹತ್ತಾರು ಪ್ರೇಕ್ಷಣಿಯ ಸ್ಥಳಗಳು, ನೂರಾರು ಶಾಸನಗಳು ಇವೆ. ಈ ಸ್ಥಳಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಪ್ರಚಾರ ನೀಡುವಲ್ಲಿ ಸಾರ್ವಜನಿಕರು ನೆರವಾಗಬೇಕು~ ಎಂದು ತಿಳಿಸಿದರು.

ಕೋಲಿ ಸಮಾಜದ ಮುಖಂಡ ದೇವೇಂದ್ರ ಕಾರೊಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ಅನಿಲ ಅಲ್ಲಂಶೆಟ್ಟಿ, ನಗರಸಭೆ ಸದಸ್ಯ ನಾಗಣ್ಣ ರಾಂಪುರ, ಉಪನ್ಯಾಸಕ ಅಖಿಲೇಶ ಕುಲಕರ್ಣಿ ಹೊನಗುಂಟಿ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

 ಸಂಚಾಲಕ ವಾಸುದೇವ ಚವ್ಹಾಣ್, ಪೂಜಪ್ಪ ಮೆತ್ರಿ, ಶ್ರೀನಿವಾಸ ದಂಡಗುಲಕರ್, ಸಿದ್ದು ವಾರಕರ್, ಲಕ್ಕಪ್ಪ ಪೂಜಾರಿ ಸೇರಿದಂತೆ ಗ್ರಾಮದ ಜನರು ಪಾಲ್ಗೊಂಡಿದ್ದರು.

ಸಾಯಬಣ್ಣ ಇಂಗಳಗಿ ಸ್ವಾಗತಿಸಿದರು, ರಾಯಪ್ಪ ಮಿಣಜಗಿ ನಿರೂಪಿಸಿದರು, ರಾಜು ಆಡಿನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.