ಔರಾದ್: ಮುಂಬರುವ ಡಿಸೆಂಬರ್ 20-21ರಂದು ಇಲ್ಲಿ ಎರಡು ದಿನಗಳ ಕಾಲ ತಾಲ್ಲೂಕು ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಪಟ್ಟಣದ ನವಚೇತನ ಶಾಲೆಯಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಪ್ರಶಾಂತ ಮಠಪತಿ ತಿಳಿಸಿದ್ದಾರೆ.
ಆಂಧ್ರ ಮತ್ತು ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಔರಾದ್ ತಾಲ್ಲೂಕಿನಲ್ಲಿ ಬಹಳ ವೈಶಿಷ್ಟ್ಯ ಮತ್ತು ಅದ್ದೂರಿಯಾಗಿ ಸಮ್ಮೇಳನ ನಡೆಸಲು ಕಾರ್ಯಕಾರಿಣಿ ಸದಸ್ಯರು ಸರ್ವ ಸಮ್ಮತಿಯಿಂದ ಒಪ್ಪಿಗೆ ಸೂಚಿಸಿದ್ದಾರೆ.
ತಾಲ್ಲೂಕಿನ ಶಾಸಕ ಪ್ರಭು ಚವ್ಹಾಣ ಅವರು ಸಮ್ಮೇಳನಕ್ಕೆ ತನು, ಮನ, ಧನದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಮ್ಮೆ ಪರಿಷತ್ತಿನ ಪದಾಧಿಕಾರಿಗಳು ಮತ್ತು ತಾಲ್ಲೂಕಿನ ಹಿರಿಯ ಕನ್ನಡ ಜೀವಿಗಳ ಜೊತೆ ಸಮಾಲೋಚನೆ ನಡೆಸಿ ಸಮ್ಮೇಳನದ ರೂಪರೇಷ ಸಿದ್ಧಪಡಿಸಲಾಗುವುದು ಎಂದು ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಕಾಂತ ನಿರ್ಮಳೆ, ನಗರ ಘಟಕ ಅಧ್ಯಕ್ಷ ವೀರೇಶ ಮೀಸೆ, ಚಿಂತಾಕಿ ವಲಯ ಅಧ್ಯಕ್ಷ ಜಗನ್ನಾಥ ಮೂಲಗೆ, ಸಂಜುಕುಮಾರ ಶೆಟಕಾರ, ಧನರಾಜ ನಿಟ್ಟೂರೆ, ಅಶೋಕರೆಡ್ಡಿ, ಸಂತೋಷ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.