ADVERTISEMENT

ಕಾಲುವೆಗೆ ನೀರು: ಜನಪ್ರತಿನಿಧಿಗಳು ಉಪವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 10:50 IST
Last Updated 8 ನವೆಂಬರ್ 2011, 10:50 IST
ಕಾಲುವೆಗೆ ನೀರು: ಜನಪ್ರತಿನಿಧಿಗಳು ಉಪವಾಸ ಅಂತ್ಯ
ಕಾಲುವೆಗೆ ನೀರು: ಜನಪ್ರತಿನಿಧಿಗಳು ಉಪವಾಸ ಅಂತ್ಯ   

ಯಾದಗಿರಿ: ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಸಮೀಪದ ಖಾನಾಪುರದ ಕೆಬಿಜೆಎನ್‌ಎಲ್ ಕಚೇರಿ ಎದುರು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು, ಜೆಡಿಎಸ್ ಮುಖಂಡರು, ನಡೆಸುತ್ತಿದ್ದ ಉಪವಾಸ ಸೋಮವಾರ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಅಂತ್ಯಗೊಂಡಿತು.

ಸೋಮವಾರ ಸಂಜೆ ಉಪವಾಸ ನಿರತರನ್ನು ಭೇಟಿ ಮಾಡಿದ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಬಿ.ವೈ. ಜುಮ್ಮನಾಳ, ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಹರಿಸುವುದು, ಕಾಲುವೆಯಲ್ಲಿ 1.7 ಗೇಜ್ ನೀರಿನ ಒತ್ತಡವನ್ನು ನಿರ್ವಹಣೆ ಮಾಡುವುದು ಹಾಗೂ ವಾರಾಬಂದಿ ಹಿಂತೆಗೆದುಕೊಳ್ಳಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡುವ ಮೂಲಕ ಉಪವಾಸವನ್ನು ಮುಕ್ತಾಯ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ದೇವರಾಜ ನಾಯಕ, ಹನುಮೇಗೌಡ ಮರಕಲ್, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಾರಾಬಂದಿ ಕುರಿತು ತೀರ್ಮಾನ ಆಗುವವರೆಗೆ, ಕೊನೆು ಭಾಗದ ರೈತರಿಗೆ ನಿರಂತರ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಭರವಸೆಗಳನ್ನು ಈಡೇರಿಸದೇ ಇದ್ದಲ್ಲಿ, ಮತ್ತೆ ಹೋರಾಟದ ಹಾದಿ ಹಿಡಿಯ ಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದರು.  ಮುಖ್ಯ ಎಂಜಿನಿಯರ್ ಇದಕ್ಕೆ ಸಮ್ಮತಿ ಸಿದ ಹಿನ್ನೆಲೆಯಲ್ಲಿ ಉಪವಾಸ ಹಿಂದಕ್ಕೆ ಪಡೆಯಲು ನಿರ್ಧರಿಸಲಾಯಿತು. ನಂತರ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರು, ಹನುಮೇಗೌಡ ಮರಕಲ್, ದೇವರಾಜ ನಾಯಕ, ಜೆಡಿಎಸ್ ಮುಖಂಡ ಶ್ರೀನಿವಾಸರೆಡ್ಡಿ ಚೆನ್ನೂರ ಅವರಿಗೆ ಎಳೆನೀರು ಕುಡಿಸುವ ಮೂಲಕ ಉಪವಾಸ ಅಂತ್ಯಗೊಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ತುನ್ನೂರ, ಶಂಕ್ರಪ್ಪ ದೋರನಳ್ಳಿ, ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ, ಸಿದ್ಧಾರೆಡ್ಡಿ ಬಲಕಲ್, ಸಹಾಯಕ ಆಯುಕ್ತ ಶರಣಪ್ಪ ಸತ್ಯಂಪೇಟ್, ತಹಸೀಲ್ದಾರ ಎಂ. ರಾಚಪ್ಪ, ಮಲ್ಲಿಕಾರ್ಜುನ ಸತ್ಯಂಪೇಟ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.