ADVERTISEMENT

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ ಆಡಳಿತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 6:55 IST
Last Updated 12 ಫೆಬ್ರುವರಿ 2011, 6:55 IST

ಯಾದಗಿರಿ: ಜಿಲ್ಲಾ ಕೇಂದ್ರದ ಸನಿಹದಲ್ಲಿಯೇ ಒಂದು ಕೊಡ ನೀರು ತರಲು ಎರಡು ರೂಪಾಯಿ ಕೊಡಬೇಕಿದ್ದ ಎಂ. ಹೊಸಳ್ಳಿ ಕ್ರಾಸ್‌ನಲ್ಲಿ ವಾಸಿಸುತ್ತಿರುವ ಬುಡ್ಗ ಜಂಗಮ ಜನಾಂಗದ ಜನರ ಬವಣೆಯನ್ನು ತಾಲ್ಲೂಕು ಆಡಳಿತ ನಿವಾರಿಸಿದೆ.

ಶುಕ್ರವಾರ ಬೋರವೆಲ್ ಅನ್ನು ಉದ್ಘಾಟಿಸುವ ಮೂಲಕ ತಹಸೀ ಲ್ದಾರ ಗುರು ಪಾಟೀಲ ಅವರು, ಸುಮಾರು 150 ಗುಡಿಸಲುಗಳ ನಿವಾಸಿಗಳಿಗೆ ನೀರು ದೊರೆಯುವಂತೆ ಮಾಡಿದರು. ಬುಡ್ಗ ಜಂಗಮ, ಶಿಳ್ಳೆಕ್ಯಾತ ಜನಾಂಗದ ಸುಮಾರು 200-300 ಜನರು ವಾಸಿಸುತ್ತಿರುವ ಈ ಪ್ರದೇಶದಲ್ಲಿ ನೀರು ಇರಲಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ದೂರದ ಹೊಸಳ್ಳಿಯಿಂದ ನೀರು ತರಬೇಕಾಗಿತ್ತು. ಅದಕ್ಕಾಗಿ ಅಟೋ ರಿಕ್ಷಾಕ್ಕೆ ಕೊಡಕ್ಕೆ ರೂ.2 ರಂತೆ ಬಾಡಿಗೆಯನ್ನು ಕೊಡಬೇಕಾಗಿತ್ತು. ಈ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ ಪತ್ರಿಕೆಯು ‘ಎಂ. ಹೊಸಳ್ಳಿಯಲ್ಲಿ ಕೊಡ ನೀರಿಗೆ 2 ರೂಪಾಯಿ’ ಎಂಬ ವರದಿಯನ್ನು ಪ್ರಕಟಿಸಿತ್ತು.

‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ತಾಲ್ಲೂಕು ಆಡಳಿತವು ಎಂ.ಹೊಸಳ್ಳಿ ಕ್ರಾಸ್‌ನಲ್ಲಿ ಬೊರವೆಲ್ ಕೊರೆಯಿಸಿ, ನೀರು ಒದಗಿಸಿದೆ. ಶುಕ್ರವಾರ ತಹ ಸೀಲ್ದಾರ ಗುರು ಪಾಟೀಲರಿಗೆ ಬಡಾ ವಣೆಯ ನಿವಾಸಿಗಳು ಸಿಹಿ ವಿತರಿಸಿ ಸಂತಸಪಟ್ಟರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ ರನ್ನು ಸನ್ಮಾನಿಸಲಾಯಿತು. ಗುಡಿಸ ಲಿನ ಜನರ ಬವಣೆಯನ್ನು ವರದಿ ಮಾಡುವ ಮೂಲಕ ಕುಡಿಯುವ ನೀರು ದೊರೆಯುವಂತೆ ಮಾಡಿದ ‘ಪ್ರಜಾವಾಣಿ’ ಪತ್ರಿಕೆಗೆ ಬುಡ್ಗ ಜಂಗಮ ಸಂಘದ ಬಿ.ಎಲ್. ಆಂಜ ನೇಯ, ಎಸ್.ವೈ. ಮಾರುತಿ, ವಿಷ್ಣು ದಾಸನಕೇರಿ, ಶಂಕರ ಶಾಸ್ತ್ರಿ, ಖಂಡಪ್ಪ, ನಾಗಪ್ಪ, ಶೇಖರ, ಅಯ್ಯಣ್ಣ, ಶಂಕರ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.