ADVERTISEMENT

ಕೆಸರಿನ ಗದ್ದೆಯಾದ ಜ್ಞಾನದೇಗುಲ!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:10 IST
Last Updated 22 ಸೆಪ್ಟೆಂಬರ್ 2011, 7:10 IST

ಶಹಾಪುರ: ತಾಲ್ಲೂಕಿನ ಅಣಬಿ ಗ್ರಾಮದ ಪ್ರಾಥಮಿಕ ಶಾಲೆಯ ಮುಂದುಗಡೆಯ ಮೈದಾನದ ಪ್ರದೇಶದಲ್ಲಿ ಮಳೆ ನೀರು ಹಾಗೂ ಒಡೆದು ಹಾಕಲಾದ ಪೈಪು ನೀರು ಸಂಗ್ರಹವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಜೊತೆಗೆ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ ಎಂದು ಗ್ರಾಮದ ಮುಖಂಡ ಮೊದಿನ್ ಪಟೇಲ್ ಆರೋಪಿಸಿದ್ದಾರೆ.

ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಜೊತೆಯಲ್ಲಿ ಪ್ರೌಢಶಾಲೆಯ ವಿಭಾಗದ ಒಟ್ಟು 350 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನವು ಇದಾಗಿದೆ. ಸುಮಾರು 500ಕ್ಕೂ ಹೆಚ್ಚು ಕುಟುಂಬಗಳಿವೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಬಡ ವಿದ್ಯಾರ್ಥಿಗಳು ಇದೇ ಶಾಲೆಗೆ ಆಗಮಿಸುತ್ತಾರೆ.

ಶಾಲೆಯ ಮುಂದುಗಡೆ  ವಿಶಾಲವಾದ ಆಟದ ಮೈದಾನವಿದ್ದರು ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಅಲ್ಲಿನ ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗಿ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದೆ.

ವಿದ್ಯಾರ್ಥಿಗಳು ಆಟವಾಡಬೇಕು ಅಂದರೆ ಅದೇ ಗದ್ದೆಯಲ್ಲಿ  ಓಡಾಡುವ ದುಸ್ಥಿತಿ ಬಂದಿದೆ.
ಅಲ್ಲದೆ ಶಾಲೆಯ ಹಿಂದುಗಡೆ ನೀರು ಸರಬರಾಜು ಮಾಡುವ ಪೈಪು ಒಡೆದು ಹಾಕಲಾಗಿದೆ ಪೊಲಾಗುತ್ತಿರುವ ನೀರು ಮೈದಾನದಲ್ಲಿ ಸಂಗ್ರಹವಾಗಿ ಇಡೀ ಪ್ರದೇಶ ಕೆಟ್ಟು ಹೋಗಿದೆ.

ತಕ್ಷಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಇತ್ತ ಗಮನಹರಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.