ADVERTISEMENT

ಕೋಟ್ಯಂತರ ರೂಪಾಯಿ ಕೃಷ್ಣಾರ್ಪಣೆಯಾಗುವ ಭೀತಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:00 IST
Last Updated 17 ಜೂನ್ 2011, 10:00 IST
ಕೋಟ್ಯಂತರ ರೂಪಾಯಿ ಕೃಷ್ಣಾರ್ಪಣೆಯಾಗುವ ಭೀತಿ
ಕೋಟ್ಯಂತರ ರೂಪಾಯಿ ಕೃಷ್ಣಾರ್ಪಣೆಯಾಗುವ ಭೀತಿ   

ಶಹಾಪುರ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ನಾರಾಯಣಪೂರ ಎಡದಂಡೆ ಕಾಲುವೆ ಅಧೀನದ ವಿತರಣಾ ಕಾಲುವೆ, ಹೊಲಗಾಲುವೆಗಳ ಪಾಲನೆ ಪೋಷಣೆಗಾಗಿ ಅಂದಾಜು 20ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದ್ದು ಕೆಲಸ ನಿರ್ವಹಿಸದೆ ಕೃಷ್ಣಾರ್ಪಣೆಯಾಗುವ ಲಕ್ಷಣಗಳು ದಟ್ಟವಾಗಿವೆ.

ಭೀಮರಾಯನಗುಡಿ, ಖಾನಾಪೂರ, ಕೆಂಭಾವಿ ವಿವಿಧ ವಿಭಾಗಗಳಿಂದ ಕಳೆದ ವಾರ ಟೆಂಡರ್‌ಗಳನ್ನು ಆಹ್ವಾನಿಸಿದಾಗ ಗುತ್ತಿಗೆದಾರರ ನಡುವೆ ರಿಂಗ್ ಸಿಸ್ಟಮ್ ಮೂಲಕ ಕೆಲಸಗಳನ್ನು ಹಂಚಿಕೆ ಮಾಡಿಕೊಳ್ಳಲಾಗಿದೆ. ಕೆಲಸ ಪಡೆದ ಗುತ್ತಿಗೆದಾರ ಅವಶ್ಯಕ ದಾಖಲೆಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸಲು ಕನಿಷ್ಠ 20 ದಿನಗಳು ಬೇಕು.

ಪ್ರತಿವರ್ಷ ಸಾಮಾನ್ಯವಾಗಿ ಜುಲೈ ಎರಡನೇಯ ವಾರದಲ್ಲಿ ಕಾಲುವೆಗೆ ನೀರು ಹರಿಸುತ್ತಾರೆ. ಇನ್ನೂ ಒಂದು ತಿಂಗಳಲ್ಲಿ ಕಾಲುವೆ ಪಾಲನೆ ಪೋಷಣೆಯ ಕಾಮಗಾರಿ ನಿರ್ವಹಿಸಲು ಅಸಾಧ್ಯ. ಆಗ ಅದೇ ರಾಗ ಅದೇ ಹಾಡು ಎನ್ನುವಂತೆ ಬೊಗಸ್ ಬಿಲ್‌ಗೆ ಅವಕಾಶ ನೀಡುವುದು ಇದು ನಿಗಮದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ಎನ್ನುತ್ತಾರೆ ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ದಾವಲಸಾಬ್ ನದಾಫ್.

ಕಳೆದ ಏಪ್ರಿಲ್ 10ರಂದು ಕಾಲುವೆಗಳಲ್ಲಿ ನೀರು ಸ್ಥಗಿತಗೊಳಿಸಲಾಗಿತ್ತು. ಆಗ ತಕ್ಷಣ ಅವಶ್ಯಕ ಕಾಲುವೆ ದುರಸ್ಥಿ ಕೆಲಸಗಳ ಬಗ್ಗೆ ಪಟ್ಟಿ ಮಾಡಿ ನೀರು ಸ್ಥಗಿತವಾದ ತಕ್ಷಣ ಕೆಲಸವನ್ನು ನಿರ್ವಹಿಸಿದರೆ ರೈತರಿಗೆ ಅನುಕೂಲವಾಗುತ್ತಿತ್ತು. ನಿಗಮದ ಎಂಜನಿಯರ್‌ಗಳು ಉದ್ದೇಶಪೂರ್ವಕವಾಗಿ ಎರಡು ತಿಂಗಳು ವಿಳಂಭ ಮಾಡಿ ಟೆಂಡರ್ ಕರೆದು ಗುತ್ತಿಗೆದಾರರಿಗೆ  ನೆರವು ನೀಡಲು ಸ್ವತಃ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ನದಾಫ್ ದೂರಿದ್ದಾರೆ.

ಗೇಟ್: ಖಾನಾಪುರ ವಿಭಾಗದಲ್ಲಿ ಗೇಟ ಅವಳಡಿಕೆಗಾಗಿ 22 ಲಕ್ಷ ವೆಚ್ಚ ಮಾಡಲಾಗಿದೆ. ಆದರೆ ಗೇಟಗಳನ್ನು ಕೆಲ ಕಡೆ ಅವಡಿಸಿಲ್ಲ ಇದರ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಮನವಿ: ಗುತ್ತಿಗೆದಾರರು ಹಾಗೂ ಎಂಜಿನಿಯರಗಳಿಗೆ ಲಾಭ ಮಾಡುವ ಉದ್ದೇಶದಿಂದ ಪಾಲನೆ ಪೋಷಣೆ ನೆಪದಲ್ಲಿ 20ಕೋಟಿ ವೆಚ್ಚದ ಕಾಮಗಾರಿ ಕರೆಯಲಾಗಿದೆ. ದೊಡ್ಡ ಮೊತ್ತದ ಹಣವು ದುರಸ್ಥಿ ನೆಪದಲ್ಲಿ ಕೃಷ್ಣಾರ್ಪಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ರೈತರ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವುದನ್ನು ನಿಲ್ಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.