ADVERTISEMENT

ಗಮನ ಸೆಳೆದ ಹೈಕೋರ್ಟ್ ನ್ಯಾಯಾಧೀಶರ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 10:25 IST
Last Updated 14 ಜನವರಿ 2011, 10:25 IST

ವಿಶೇಷ ವರದಿ
ಶಹಾಪುರ:
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಈಚೆಗೆ ಮುಕ್ತಾಯದ ಕೃಷಿಮೇಳ ಹಾಗೂ ಜಿಲ್ಲಾ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಭಾಗವಹಿಸುವಿಕೆ ಜೊತೆಗೆ ಹಲವು  ಚಿಂತನೆಯ ಉಪಯುಕ್ತ ಮಾಹಿತಿ ರೈತರಿಗೆ ನೆಮ್ಮದಿ ನೀಡಿದವು.

ಕಾನೂನು ನೆರವು ಉಪನ್ಯಾಸ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ಅರಳಿ ನಾಗರಾಜ ತಮ್ಮ ಹರಿತವಾದ ಮೊನಚು ಮಾತುಗಳಿಂದ ಸಭೆಯನ್ನು ಕೆಲ ಕಾಲ ಮಂತ್ರಮುಗ್ದರನ್ನಾಗಿಸಿದರು.ಸರ್ಕಾರ ಹಿಡಿಗಾಸು ಸಬ್ಸಡಿ ನೆರವಿನ ಅಭಯ ಬೇಡ. ಬೆಳೆ ನೀತಿ ಪದ್ಧತಿ ಜಾರಿಯಾಗಲಿ. ಅದು ಬಿತ್ತನೆ  ಮಾಡುವ ಪೂರ್ವದಲ್ಲಿಯೇ ಬೆಳೆಯ ಬೆಲೆ ನಿಗದಿಪಡಿಸಿದರೆ ರೈತರಿಗೆ ಬೆಳೆ ಆಯ್ಕೆಯ ಅವಕಾಶವಿದೆ.

ಗೌರವಯುತವಾಗಿ ಜೀವಿಸುವ ಪ್ರತಿಯೊಬ್ಬರ ರೈತರ ಹಕ್ಕು ಇದೆ. ತನ್ನ ಹಕ್ಕಿಗೆ ಚ್ಯುತಿ ಬಂದಾಗ ಆತ್ಮಹತ್ಯೆಯಂತ ಕೆಲಸಕ್ಕೆ ಕೈಹಾಕದೆ ಕಾನೂನು ಕದ ತಟ್ಟಿ.  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ಗೆ ಹಾಕಿ ಎಂಬ ನೇರ ಮಾತುಗಳಿಂದ ಕೊನೆ ಪಕ್ಷ ನಮ್ಮ ಕಣ್ಣಿರಿನ ಕಥೆಗೆ ಸ್ಪಂದಿಸಿದ್ದಕ್ಕೆ ರೈತರು ಅಭಿನಂದಿಸಿದ್ದಾರೆ.ರಾಣೆಬೆನ್ನೂರಿನ ಚನ್ನಬಸಪ್ಪ ಕಂಬಳಿಯವರು ರೈತರ ಜೊತೆ ಸಂವಾದ ಸಭೆಯಲ್ಲಿ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ದೇಶಿ ಬೀಜದ ಬಗ್ಗೆ ಕಲ್ಪನೆ ನೀಡಿ. ಸಬ್ಸಡಿ ಎಂಬ ಎಂಜಲು ಸರ್ಕಾರ ನೀಡಿ ರೈತರನ್ನು ಮೈಗಳ್ಳರನ್ನಾಗಿ ಮಾಡಿದೆ. ನೀರು ಜೀವನದ ಸಂಜೀವಿನಿಯಾಗಿದೆ.ಮಿತವಾದ ನೀರು ಬಳಕೆಯಿಂದ ಭೂಮಿಯ ಫಲವತ್ತತೆ ಕಾಯ್ದುಕೊಳ್ಳಬಹುದು. ಹಿಂದೆ ಜಮೀನುಗಳು ಬ್ರೆಡ್ ಇದ್ದಾಂಗ ಇತ್ತು ಈಗ ರೊಸ್ಟ ಚಪಾತಿಯಾಗಿದೆ. ಅಧಿಕ ರಸಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಲವಣಾಂಶಗಳು ನಾಶವಾಗುತ್ತಿವೆ. ಮಳೆ ನೀರು ಸಂರಕ್ಷಣೆಗೆಯಿಂದ ಅಂತರ್ಜಲಮಟ್ಟವನ್ನು ಕಾಪಾಡಿಕೊಳ್ಳಲು ರೈತರಿಗೆ ಉತ್ತಮ ಅವಕಾಶವಿದೆ. ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಹೆಚ್ಚಿನ ರೈತರಿಗೆ ಹಿಡಿಸಿತು ಎನ್ನುತ್ತಾರೆ ರೈತ ಮಲ್ಲಪ್ಪ.

ರೈತರ ಸಂವಾದದಲ್ಲಿ ಭಾಗವಹಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಕರೆಡ್ಡಿಯವರು ಕೃಷಿ ವಿಜ್ಞಾನಿಗಳ ದ್ವಂದ್ವ ನಿಲವುಗಳ ಬಗ್ಗೆ ತರಾಟೆಗೆ ತೆಗೆದುಕೊಂಡು  ಕೃಷಿಯಲ್ಲಿ ಸಾಧನೆಗೈದ ರೈತರ ಬಗ್ಗೆ ಮಾತನಾಡುವ ಕೃಷಿ ವಿಜ್ಞಾನಿಗಳು ಅದೇ ಬೆಳೆ ಹಾನಿಯಿಂದ ಆತ್ಮಹತ್ಯೆ ಮಾಡಿಕೊಂಡ ಕನಿಷ್ಠ ಒಬ್ಬ ರೈತರ ಇನ್ನೊಂದು ಕರಾಳ ಮುಖದ ನೋವಿನ ಬಗ್ಗೆ ಯಾಕೆ ಮೌನವಹಿಸುತ್ತೀರಿ ಎನ್ನುವ ಚಾಟಿ ಎಟಿಗೆ ಯಾರಿಂದಲೂ ಉತ್ತರ ಬರಲಿಲ್ಲ.

 ಸಮಾರೋಪ ಸಭೆಯಲ್ಲಿ ಸ್ವತಃ ಕೃಷಿ ವಿಜ್ಞಾನಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಮಾತನಾಡುತ್ತಾ ಆಂಧ್ರವಲಸಿಗರು ಕೃಷಿಯಿಂದಲೇ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಆದೇ ನಮ್ಮ ರೈತರು ಅವರ ಹೊಲದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಯಾವುದೆ ಬೆಳೆ ಬೆಳೆದರು ಸ್ಥಳೀಯವಾಗಿ ಅದರ ಮಾರುಕಟ್ಟೆಯಿದ್ದರೆ ರೈತರು ಬೆಳೆಹಾನಿ ಹಾಗೂ ಧಾರಣಿ ಕುಸಿತದಿಂದ ಹೊರಬಹುದಾಗಿದೆ. ಆಧುನಿಕ ಕೃಷಿ ಪದ್ಧತಿಯ ಜೊತೆಗೆ ಅವಶ್ಯಕವಾದಷ್ಟು ಗೊಬ್ಬರ ಬಳಕೆ ಮಡಬೇಕು ಎನ್ನುವ ಅವರ ಚಿಂತನೆ ರೈತರಿಗೆ ಹೆಚ್ಚು ಮುದ ನೀಡಿತು.

ಹೀಗೆ ಹಲವಾರು ಲೋಪ ದೋಷಗಳ ನಡುವೆ ಮೂರು ದಿನಗಳ ಕಾಲ ನಡೆದ ಕೃಷಿಮೇಳ ಹಲವು ಮಹತ್ವದ ಚಿಂತನೆ ಹಾಗೂ ಮಾಹಿತಿ ರೈತರಿಗೆ ಹೆಚ್ಚಿನ ಅನುಕೂಲವಾಯಿತು ಎನ್ನುವುದು ಮೇಳದಲ್ಲಿ ಭಾಗವಹಿಸಿದ  ರೈತರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.