ಯಾದಗಿರಿ: ನಗರದಲ್ಲಿ ನಡೆಯುವ ಗಜಾನನ ಉತ್ಸವಕ್ಕೆ ಡಿ.ಜೆ. ಧ್ವನಿವರ್ಧಕ ಬಳಕೆ ಮಾಡುವುದನ್ನು ನಿಷೇಧ ಮಾಡಿರುವ ಜಿಲ್ಲಾಡಳಿತ ಕ್ರಮವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಗಜಾನನ ಉತ್ಸವ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸೋಮವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗಣೇಶನ ಉತ್ಸವ ಸಾರ್ವಜನಿಕವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಏಕತೆ ಮತ್ತು ಭಾವೈಕ್ಯ ಮೂಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಂತಹ ಸಮಾರಂಭಗಳಿಗೆ ಡಿ.ಜೆ.ಸೌಂಡ್ ಸಿಸ್ಟಮ್ ಬಳಕೆಗೆ ನಿಷೇಧ ಹೇರಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಧ್ವನಿ ವರ್ಧಕಗಳ ಬಳಕೆಗೆ ಯಾವುದೆ ನಿರ್ಬಂಧ ಇಲ್ಲ. ನಮ್ಮ ಜಿಲ್ಲೆಯಲ್ಲಿ ಇಂತಹ ನಿಷೇಧ ಏಕೆ ಎಂದು ಪ್ರಶ್ನಿಸಿದ ಸಂಘಟನೆಕಾರರು, ಕೂಡಲೆ ನಿಷೇಧ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಟಿ.ಎನ್.ಭೀಮುನಾಯಕ, ತೇಜರಾಜ ರಾಠೋಡ್, ಅಂದಯ್ಯ ಶಾಬಾದಿ, ರಮೇಶ ಕೋಟಿಮನಿ, ಸೋಹನ ಪ್ರಸಾದ್, ವಿಜಯ ಪಾಟೀಲ್, ಅಶೋಕ ಮದ್ನಾಳಕರ್, ರಾಜು ದಿಲ್ಲಿಕರ್, ವೇಂಕಟೇಶ ಮಿಲ್ಟ್ರಿ, ಮಹಾವಿರ ನಿಂಗೇರಿ, ರಘುನಾಥ ಚೌವಾಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.