ADVERTISEMENT

ತಡಿಬಿಡಿ: ತರಕಾರಿ ವ್ಯಾಪಾರಿಗಳ ಗೋಳು

​ಪ್ರಜಾವಾಣಿ ವಾರ್ತೆ
Published 20 ಮೇ 2014, 11:23 IST
Last Updated 20 ಮೇ 2014, 11:23 IST
ಯಾದಗಿರಿ ಸಮೀಪದ ತಡಿಬಿಡಿ ಗ್ರಾಮದ ಸಂತೆಯಲ್ಲಿ ರಸ್ತೆಯ ಮೇಲೆ ಕುಳಿತು ತರಕಾರಿ ಮಾರುತ್ತಿರುವ ವ್ಯಾಪಾರಸ್ಥರು
ಯಾದಗಿರಿ ಸಮೀಪದ ತಡಿಬಿಡಿ ಗ್ರಾಮದ ಸಂತೆಯಲ್ಲಿ ರಸ್ತೆಯ ಮೇಲೆ ಕುಳಿತು ತರಕಾರಿ ಮಾರುತ್ತಿರುವ ವ್ಯಾಪಾರಸ್ಥರು   

ಯಾದಗಿರಿ: ಕೇವಲ ಎರಡು ಗ್ರಾಮ­ಗಳ ವ್ಯಾಪ್ತಿಯನ್ನು ಹೊಂದಿರುವ ಶಹಾಪುರ ತಾಲ್ಲೂಕಿನ ಚಿಕ್ಕ ಗ್ರಾಮ ಪಂಚಾಯಿತಿ ತಡಿಬಿಡಿ. ಹುಂಡೆಕಲ್ ಮತ್ತು ತಡಿಬಿಡಿ ಗ್ರಾಮಗಳ ವ್ಯಾಪ್ತಿ­ಯನ್ನು ಹೊಂದಿರುವ ಈ ಪಂಚಾಯಿತಿ­ಯಲ್ಲಿ 13 ಸದಸ್ಯರು ಆಯ್ಕೆಯಾಗಿ­ದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತರಕಾರಿ ಮಾರುಕಟ್ಟೆ ಇಲ್ಲದೇ ಇರುವುದರಿಂದ ವ್ಯಾಪಾರ­ಕ್ಕಾಗಿ ಬರುವ ವರ್ತಕರು ರಸ್ತೆಯ ಮೇಲೆಯೇ ತರಕಾರಿ ಮಾರು­ವಂತಾಗಿದೆ.

ಪ್ರತಿ ಬುಧವಾರ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ರೈತರು ತಾವು ಬೆಳೆದ ತರಕಾರಿ, ದವಸ– ಧಾನ್ಯಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರು­ತ್ತಾರೆ. ಆದರೆ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಬಿಸಿಲು–ಮಳೆ ಎನ್ನದೇ ರಸ್ತೆಯ ಬದಿಯಲ್ಲಿ ಕುಳಿತು­ಕೊಂಡು ವ್ಯಾಪಾರ ಮಾಡು­ವಂತಾಗಿದೆ.

ಸುತ್ತಲಿನ ಗ್ರಾಮಸ್ಥರು ಮತ್ತು ಗ್ರಾಮದವರು ವಾರಕ್ಕೆ ಬೇಕಾದಷ್ಟು ತರಕಾರಿ ಹಾಗೂ ದಿನಸಿಯನ್ನು ಖರೀದಿ­ಸಲು ಈ ಸಂತೆಗೆ ಬರುತ್ತಾರೆ. ಎಲ್ಲೆಡೆ ಸಂತೆಯು ಬೆಳಿಗ್ಗೆಯಿಂದ ಆರಂಭ­ವಾದರೆ, ಈ ಗ್ರಾಮದಲ್ಲಿ ಮಾತ್ರ ಮಧ್ಯಾಹ್ನದ ನಂತರ ಸಂತೆ ಶುರು­ವಾಗುತ್ತದೆ.
ಸ್ಥಳದ ಅಭಾವ, ಖಾಸಗಿ ವ್ಯಕ್ತಿಗಳ ಸ್ಥಳಗಳಲ್ಲಿ ತಾವು ತಂದ ತರಕಾರಿ, ದಿನಸಿಗಳನ್ನು ಬುಟ್ಟಿಯಲ್ಲಿ ಚೀಲದಲ್ಲಿ ಇಟ್ಟುಕೊಂಡು ವ್ಯಾಪಾರವನ್ನು ಮಾಡುವ ದುಃಸ್ಥಿತಿ ಬಂದಿದೆ.

‘ಸ್ಥಳವನ್ನು ನೀಡಿದ ಖಾಸಗಿ ವ್ಯಕ್ತಿಗಳು, ಒಂದು ಬುಟ್ಟಿಯಿಂದ ಕನಿಷ್ಠ­ವೆಂದರೂ ₨ 10 ವಸೂಲಿ ಮಾಡು­ತ್ತಾರೆ. ಹತ್ತು ರೂಪಾಯಿ ಹೋದರೂ ಚಿಂತೆ ಇಲ್ಲ, ನಮಗೆ ಕುಳಿತುಕೊಂಡು ವ್ಯಾಪಾರವನ್ನು ಮಾಡಲು ಅವಕಾಶ ಕೊಡುತ್ತಾರಲ್ಲ ಅಷ್ಟೆ ಸಾಕು’ ಎಂದು ತರಕಾರಿ ಮಾರುವ ಕ್ಯಾತನಾಳ ಗ್ರಾಮದ ಮಲ್ಲಮ್ಮ ಹೇಳುತ್ತಾರೆ.

ಆದರೆ ತರಕಾರಿ ಮಾರಾಟಗಾರರಿಗೆ ಹಾಗೂ ದಿನಸಿ ಮಾರಾಟಗಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸ­ಬೇಕಾದ ಪಂಚಾಯಿತಿಯು ಇತ್ತ ಗಮನ ನೀಡುತ್ತಿಲ್ಲ. ಇದರಿಂದಾಗಿ ವಾರದ ಸಂತೆಗಾಗಿ ಈ ಗ್ರಾಮಕ್ಕೆ ಬರುವ ಜನರು ಹಾಗೂ ವ್ಯಾಪಾರ­ಸ್ಥರು ತೊಂದರೆ ಎದುರಿಸುವಂತಾಗಿದೆ.

‘ನಾವು ಕಷ್ಟಪಟ್ಟು ಬೆಳೆದ ತರ­ಕಾರಿ­ಯನ್ನು ಈ ಸಂತೆಗೆ ತಂದು ಮಾರಾಟ ಮಾಡಬೇಕಾದರೆ ಸರಿಯಾದ ಸ್ಥಳ­ವಿಲ್ಲ. ಇದರಿಂದಾಗಿ ವ್ಯಾಪಾರದಲ್ಲಿ ಸಾಕಷ್ಟು ನಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಶಂಕ್ರಪ್ಪ ಹೇಳುತ್ತಾರೆ.

ಗ್ರಾಮ ಪಂಚಾಯಿತಿಯು ತರಕಾರಿ ಹಾಗೂ ದಿನಸಿ ಮಾರಾಟಗಾರರಿಗೆ ಸ್ಥಳವನ್ನು ಒದಗಿಸಿಕೊಡಬೇಕು. ಖಾಸಗಿ ವ್ಯಕ್ತಿಗಳಿಗೆ ಕೊಡುವ ಹಣ­ವನ್ನು ವ್ಯಾಪಾರಸ್ಥರು ಪಂಚಾ-­ಯಿತಿಯೇ ಆಕರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದು ಗ್ರಾಮದ ಜನರ ಸಲಹೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.