ADVERTISEMENT

`ತತ್ವಪದಗಳಲ್ಲಿ ಅಧ್ಯಾತ್ಮದ ಒಲವಿದೆ'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:38 IST
Last Updated 2 ಸೆಪ್ಟೆಂಬರ್ 2013, 8:38 IST

ಯಾದಗಿರಿ: ತತ್ವಪದಗಳು ಸಮಾಜದ ಒರೆಕೊರೆಯನ್ನು ತಿದ್ದುವ ಜೊತೆಗೆ ಅಧ್ಯಾತ್ಮದ ಒಲವನ್ನು ಹೊಂದಿವೆ ಎಂದು ಉಪನ್ಯಾಸಕ ವೆಂಕಟರಾವ ಕುಲಕರ್ಣಿ ಹೇಳಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಭಾನುವಾರ ವಿಶ್ವಬಂಧು ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತುಗಳ ಆಶ್ರಯದಲ್ಲಿ ನಡೆದ ಸಪ್ತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದರು.

ಯಮುನೂರೇಶ ಬಿರಾದಾರ 620ಕ್ಕೂ ಹೆಚ್ಚು ತತ್ವಪದಗಳನ್ನು ರಚಿಸಿದ್ದು, ಇವು ಕೂಡಲೂರ ಬಸವಣ್ಣ ಹಾಗೂ ಶಿಶುನಾಳ ಶರೀಫರ ಪದಗಳ ಧಾಟಿಯನ್ನು ಹೋಲುತ್ತವೆ. ಸಂಸಾರ ಮತ್ತು ಪಾರಮಾರ್ಥ ಸಾಧಿಸುವ ನಿಟ್ಟಿನಲ್ಲಿ ತತ್ವಪದಗಳು ಓದುಗರಿಗೆ ದಾರಿಯಾಗಿವೆ ಎಂದರು.

ಭಾಗ್ಯವತಿ ಕೆಂಭಾವಿ ರಚಿಸಿದ `ಸಿರಿಸೊಡರು' ಕವನ ಸಂಕಲನ ಕುರಿತು ಮಾತನಾಡಿದ ಸಾಹಿತಿ ಚಂದ್ರಕಾಂತ ಕರದಳ್ಳಿ, ಲೇಖಕಿ ಸ್ತ್ರೀ ಸಹಜ ಭಾವನೆಯಿಂದ ಸಮಾಜದ ಓರೆಕೊರೆಗಳನ್ನು ತಿದ್ದಿದ್ದು, ಕವನಗಳಲ್ಲಿ ಒಂದು ಸಂದೇಶ, ಸ್ಫೂರ್ತಿ ಇದೆ ಎಂದರು.

ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, ಸಾಹೇಬಗೌಡ ಬಿರಾದಾರ ರಚಿಸಿದ `ಅಂತರಂಗದ ಕೂಗು' ಕೃತಿಯಲ್ಲಿ ಚುಟುಕಿನ ಚಟಾಕಿಯಿದೆ. ಜಾನಪದ ಶೈಲಿ ಇದೆ. ಪರಿಸರ ಪ್ರೇಮವನ್ನು ಮೂಡಿಸುವ ಕವನಗಳಿವೆ ಎಂದರು.

ಶಿಕ್ಷಕ ನವೀನಕುಮಾರ ರಚಿಸಿ `ಕ್ರಾಂತಿ ದೀವಿಗೆ' ಕುರಿತು ಡಾ.ಭೀಮರಾಯ ಲಿಂಗೇರಿ ಮಾತನಾಡಿದರು.
ಮಹಿಪಾಲರಡ್ಡಿ, ಶರಣಗೌಡ ಪಾಟೀಲ, ಆದೇಶಪ್ಪ ಬಾಗ್ಲಿ, ಸಿದ್ರಾಮಪ್ಪ ದುಪ್ಪಲ್ಲಿ, ಸೋಮರಡ್ಡಿ ಎಲ್ಹೇರಿ, ಮಾರುತಿ ಮುಂಡಾಸ ಅವರನ್ನು ಸನ್ಮಾನಿಸಲಾಯಿತು.

ಅಬ್ಬೇತುಮಕೂರಿನ ಗಂಗಾಧರ ಶ್ರೀಗಳು, ಗುರುಮಠಕಲ್ ಖಾಸಾಮಠದ ಶಾಂತವೀರ ಶ್ರೀಗಳು, ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.