ADVERTISEMENT

ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 8:35 IST
Last Updated 23 ಫೆಬ್ರುವರಿ 2011, 8:35 IST

ಯಾದಗಿರಿ: ಪ್ರಾಂಶುಪಾಲರ ಅಸಭ್ಯ ವರ್ತನೆಯಿಂದ ಬೇಸತ್ತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಸೆಂಟ್ ಮದರ್ ತೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರಾಂಶುಪಾಲರ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೂಡಲೇ ತಮಗೆ ಬೇರೆ ಕಾಲೇಜಿನಲ್ಲಿ ಪ್ರವೇಶ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಪ್ರಾಂಶುಪಾಲ ಜಾನ್‌ಸನ್ ಎಂಬುವವರು ನಿತ್ಯ ಕುಡಿದು ತಮಗೆ ತೊಂದರೆ ನೀಡುತ್ತಿದ್ದಾರೆ. ಪಕ್ಕದಲ್ಲಿಯೇ ವಸತಿ ನಿಲಯವಿದ್ದು, ತಮ್ಮ ಕೋಣೆಗಳಿಗೆ ಪ್ರವೇಶಿಸಿ ಅಸಭ್ಯ ವಾಗಿ ವರ್ತಿಸುತ್ತಿದ್ದಾರೆ.ಇದರಿಂದ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ಇದನ್ನು ಸಹಿಸಲು ಆಗುತ್ತಿಲ್ಲ ಎಂದು ದೂರಿದರು. ಅಶ್ಲೀಲವಾಗಿ ಮಾತನಾ ಡುವುದಲ್ಲದೇ, ಅಶ್ಲೀಲ ಸಿ.ಡಿ.ಗಳನ್ನು ವೀಕ್ಷಿ ಸುತ್ತ ಕುಳಿತುಕೊಳ್ಳುತ್ತಾರೆ. ತಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸು ತ್ತಾರೆ. ಇದನ್ನು ಯಾರ ಬಳಿ ಹೇಳಿ ಕೊಳ್ಳಬೇಕು ಎಂದು ಕೆಲ ವಿದ್ಯಾರ್ಥಿನಿ ಯರು ಕಣ್ಣೀರಿಟ್ಟರು.

ಕೂಡಲೇ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕು. ಎಲ್ಲ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾಯಿಸಬೇಕು. ಇದರಿಂದ ಪ್ರಾಂಶುಪಾಲರ ಕಿರುಕಳ ತಪ್ಪುತ್ತದೆ. ವ್ಯಾಸಂಗ ಮಾಡಲು ಬಂದಿರುವ ತಮಗೆ ಈ ಹಿಂಸೆಯನ್ನು ತಾಳಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಪ್ರಾಂಶುಪಾಲರ ಕೋಣೆಯಲ್ಲಿ ಮದ್ಯದ ಬಾಟಲಿಗಳು: ಈ ಬಗ್ಗೆ ಪರಿಶೀಲಿಸಲು ಕಾಲೇಜಿನ ಪ್ರಾಂಶು ಪಾಲರ ಕೋಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಬಾಕ್ಸ್ ಮದ್ಯದ ಬಾಟಲಿಗಳು ಪತ್ತೆಯಾದವು. ಅಲ್ಲದೇ ಅಶ್ಲೀಲ್ ಸಿ.ಡಿ.ಗಳು, ಸಿಡಿ ಪ್ಲೇಯರ್, ಟಿ.ವಿ. ಸೇರಿದಂತೆ ಹಲ ವಾರು ಸಾಮಗ್ರಿಗಳು ಪ್ರಾಂಶುಪಾಲರ ಕೊಣೆಯಲ್ಲಿ ಸಿಕ್ಕಿವೆ.

ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರ ಪಕ್ಕದಲ್ಲಿಯೇ ವಿದ್ಯಾರ್ಥಿನಿಯರ ವಸತಿ ನಿಲಯವಿದ್ದು, ನಿತ್ಯವೂ ಪ್ರಾಂಶುಪಾಲರು ತಮ್ಮ ಕೋಣೆಗಳಿಗೆ ಬಂದು ಕಿರುಕಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿದರು. ಈ ಬಗ್ಗೆ ತನಿಖೆ ನಡೆಸಿ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮಗೆ ರಕ್ಷಣೆ ನೀಡಬೇಕು. ವ್ಯಾಸಂಗವನ್ನು ಮುಂದುವರಿಸಲು ಅನುವಾಗುವಂತೆ ಬೇರೆ ಕಾಲೇಜಿಗೆ ತಮ್ಮನ್ನು ವರ್ಗಾಯಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಕ್ರಿಮಿನಲ್ ಮೊಕದ್ದಮೆಗೆ ಸೂಚನೆ:
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.ಈ ಕುರಿತು ಕೂಲಂಕಷವಾಗಿ ಪರಿ ಶೀಲಿಸಿ, ವರದಿ ನೀಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಆರೋಪ ಸಾಬೀತಾ ದಲ್ಲಿ ಕಾಲೇಜಿನ ಮಾನ್ಯತೆ ರದ್ದುಪಡಿ ಸಲಾಗುವುದು. ವಿದ್ಯಾರ್ಥಿಗಳು ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.