ADVERTISEMENT

ನಾಯ್ಕಲ್‌ ನೀರಿನ ಸಮಸ್ಯೆ ನಿವಾರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 8:18 IST
Last Updated 20 ಮಾರ್ಚ್ 2014, 8:18 IST

ಯಾದಗಿರಿ: ಸಮೀಪದ ನಾಯ್ಕಲ್‌ ಗ್ರಾಮದ ಜನರ ನೀರಿನ ಸಮಸ್ಯೆ ನಿವಾ­ರಣೆ ಆದಂತಾಗಿದೆ. ನೀರಿಗಾಗಿ ಕಿಲೊ ಮೀಟರ್‌ಗಟ್ಟಲೆ ಅಲೆಯುತ್ತಿದ್ದ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಡು­ವಂತಾಗಿದೆ.

‘ಪ್ರಜಾವಾಣಿ’ ಪತ್ರಿಕೆಯ ಬುಧ­ವಾರದ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ‘ನಾಯ್ಕಲ್‌ ಗ್ರಾಮದಲ್ಲಿ ನೀರಿಗೆ ಪರದಾಟ’ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಬುಧ­ವಾರವೇ ಸಮಸ್ಯೆ ನಿವಾರಣೆಗೆ ಮುಂದಾ­ಗಿದ್ದಾರೆ.

ಇಲಾಖೆಯ ಜಿಲ್ಲಾ ಮಟ್ಟದ ಅಧಿ­ಕಾರಿಗಳು, ತಾಲ್ಲೂಕು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದ­ರಿಂದ ಶಹಾಪುರ ತಹಶೀಲ್ದಾರರು ಮತ್ತು ಪಂಚಾಯತ್‌ ರಾಜ್‌ ಎಂಜಿನಿ­ಯ­ರಿಂಗ್‌ನ ಸಹಾಯಕ ಕಾರ್ಯ­ನಿರ್ವಾ­­ಹಕ ಎಂಜಿನಿಯರ್‌ ಅವರು, ನಾಯ್ಕಲ್‌ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾ­ಧಿ­ಕಾರಿ­ಗ­ಳನ್ನು ಸಂಪರ್ಕಿಸಿ, ಗ್ರಾಮದ ನೀರಿನ ಸಮಸ್ಯೆ­ಯನ್ನು ಬುಧ­ವಾರ ಸಂಜೆ­ಯ­­ವರೆಗೆ ಸರಿಪಡಿಸು­ವಂತೆ ತಾಕೀತು ಮಾಡಿದರು.

ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ದೇವರಾಜ್ ಮತ್ತು ಪಿಡಿಒ ಸಿದ್ರಾಮಪ್ಪ ಕ್ಯಾತನಕಟ್ಟೆ, ಕೊಳವೆಬಾವಿಗೆ ಹೊಸ ಮೋಟಾರ್‌ ಹಾಗೂ ಸ್ಟಾರ್ಟರ್ ಅಳ­ವಡಿಸಲು ಕ್ರಮ ಕೈಗೊಂಡಿದ್ದಾರೆ.

ಮೋಟಾರ್‌ ದುರಸ್ತಿ ಮಾಡಲು ಮೆಕ್ಯಾನಿಕ್ ತೋರಿದ ನಿಷ್ಕಾಳಜಿಯಿಂದ ತೊಂದರೆಯಾಗಿದೆ. ಗುರುವಾರ ಬೆಳಿಗ್ಗೆ ನಾಯ್ಕಲ್ ಗ್ರಾಮಸ್ಥರಿಗೆ ನೀರು ಸರಬ­ರಾಜು ಮಾಡುವುದಾಗಿ ಗ್ರಾಮ ಲೆಕ್ಕಾ­ಧಿ­ಕಾರಿ ದೇವರಾಜ್ ಮತ್ತು ಪಿಡಿಒ ಸಿದ್ರಾಮಪ್ಪ ಕ್ಯಾತನಕಟ್ಟೆ ಭರವಸೆ ನೀಡಿದ್ದಾರೆ.

ವರದಿ ಪ್ರಕಟಿಸಿ ನೀರಿನ ಸಮಸ್ಯೆ ನಿವಾ­ರಣೆಗೆ ಕಾರಣವಾದ ‘ಪ್ರಜಾವಾಣಿ’ ಪತ್ರಿಕೆಗೆ ನಾಯ್ಕಲ್ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.