ADVERTISEMENT

ಪುರಸಭೆಯಾದರೂ ಅಭಿವೃದ್ಧಿ ಕಾಣದ ಕಕ್ಕೇರಾ

ಪಟ್ಟಣದಲ್ಲಿ ಇಲ್ಲ ಒಂದೂ ಸಾರ್ವಜನಿಕ ಶೌಚಾಲಯ, ತಪ್ಪದ ಸಾರ್ವಜನಿಕರ ಪರದಾಟ

ಮಹಾಂತೇಶ ಸಿ.ಹೊಗರಿ
Published 3 ಅಕ್ಟೋಬರ್ 2017, 10:59 IST
Last Updated 3 ಅಕ್ಟೋಬರ್ 2017, 10:59 IST

ಕಕ್ಕೇರಾ: ಬಯಲು ಶೌಚಾಲಯ ಮುಕ್ತ ಮಾಡಲು ಸರ್ಕಾರ ವಿವಿಧ ಯೋಜನೆಗಳನ್ನು ಹಾಕಿಕೊಂಡು ಸ್ವಚ್ಛತೆ ಕಾಪಾಡಲು ಹೊರಟರೆ ಇತ್ತ ಕಕ್ಕೇರಾದಲ್ಲಿ ಮಾತ್ರ ನಮಗೆ ಸಂಬಂಧ ಇಲ್ಲ ಎನ್ನುವಂತೆ ಅಧಿಕಾರಿಗಳು ಇದ್ದಾರೆ.

ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹಲವು ಸಲ ಶೌಚಾಲಯದ ನಿರ್ಮಿಸುವಂತೆ ಮನವಿ ಮಾಡಿದರೂ, ಪುರಸಭೆ ಎಚ್ಚೆತ್ತುಕೊಂಡಿಲ್ಲ. ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ಒಂದೂ ಸಾರ್ವಜನಿಕ ಶೌಚಾಲಯ ಇಲ್ಲ. ಬೇರೆ ಊರುಗಳಿಂದ ಬಂದವರಿಗೆ ಶೌಚಾಲಯದ ಪರಿಸ್ಥಿತಿ ಆ ದೇವರೇ ಬಲ್ಲ ಎನ್ನುವಂತಾಗಿದೆ. ಪಟ್ಟಣದಲ್ಲಿನ ಸ್ವಚ್ಛತೆ, ಸಾರ್ವಜನಿಕರ ಶೌಚಾಲಯಗಳ ಈ ಸ್ಥಿತಿಗೆ ಪುರಸಭೆಯ ಮುಖ್ಯಾಧಿಕಾರಿ ನಿರ್ಲಕ್ಷವೇ ಕಾರಣ ಎಂಬುದಾಗಿ ಪಟ್ಟಣದ ನಿವಾಸಿಗಳು ಆರೋಪಿಸುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿ 200 ಗಂಟೆಗಳಲ್ಲಿ 21,129 ಶೌಚಾಲಯ ನಿರ್ಮಿಸಿ ದಾಖಲೆ ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಪುರಸಭೆಯ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ಒಂದು ಸಾರ್ವಜನಿಕರ ಶೌಚಾಲಯ ನಿರ್ಮಿಸಿದರೆ ಸಾಕು ಎಂದು ಸಾರ್ವಜನಿಕರು ಹೇಳುತ್ತಾರೆ.

ADVERTISEMENT

ಪಟ್ಟಣದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಎರಡು ಮಾತ್ರ ನಿರ್ಮಿಸಿ, ಇನ್ನುಳಿದ ಎರಡು ಘಟಕಗಳು ಯಾವ ಕಡೆಗೆ ನಿರ್ಮಿಸಿದ್ದಾರೆ ಎಂಬುದೇ ಮಾಹಿತಿ ಇಲ್ಲ. ಪಟ್ಟಣದಲ್ಲಿ ಒಂದು ಘಟಕ ಮಾತ್ರ ಚಾಲ್ತಿಯಲ್ಲಿದ್ದು, ಇನ್ನೊಂದು ಮಾತ್ರ ಪ್ರಾರಂಭವೇ ಆಗಿಲ್ಲ. ಪಟ್ಟಣ ಶುದ್ಧ ಕುಡಿಯುವ ನೀರಿನ ಹಳೆಬಜಾರ ಘಟಕವನ್ನು ಕೂಡಲೇ ಆರಂಭಿಸಬೇಕು ಎಂದು ರಾಜೂ ಬಳಿಚಕ್ರ ಮನವಿ ಮಾಡಿದ್ದಾರೆ.

ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸಿ.ಸಿ ರಸ್ತೆಗಳು ನಿರ್ಮಾಣ ಮಾಡಿದ್ದು, ಇನ್ನು ಹಲವು ವಾರ್ಡ್‌ಗಳಲ್ಲಿ ಸಿ.ಸಿ ರಸ್ತೆ ನಿರ್ಮಿಸಬೇಕು. ಚರಂಡಿಗಳಲ್ಲಿನ ಹೂಳು ತೆಗೆದಿಲ್ಲ. ಚರಂಡಿ ನೀರು ಹೋಟೆಲ್ ಹಾಗೂ ಮನೆಯೊಳಗೆ ನುಗ್ಗಿ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಮೊದಲು ಚರಂಡಿಗಳನ್ನು ಸ್ವಚ್ಛತೆ ಮಾಡಿಸಬೇಕು ಎಂದು ರಾಣಿ ಹೊಟೇಲ್ ಮಾಲೀಕ ಷಣ್ಮುಕರೆಡ್ಡಿ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಇರುವ ನೂತನ ಬಸ್ ನಿಲ್ದಾಣ ಸಂಪೂರ್ಣವಾಗಿ ಮುಳ್ಳು ಕಂಟಿಗಳಿಂದ ತುಂಬಿದೆ. ಕೂಡಲೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ರೈತ ಸಂಘದ ಹಣಮಂತ್ರಾಯಗೌಡ ಒತ್ತಾಯಿಸುತ್ತಾರೆ.

ಪಟ್ಟಣದಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ತೀರಾ ಹಳೆ ಯದಾಗಿವೆ. ಅವುಗಳಿಂದ ಅನಾ ಹುತವಾಗುವ ಮೊದಲೇ ಜೆಸ್ಕಾಂ ಎಚ್ಚೆತ್ತು ಕೊಳ್ಳಬೇಕು. ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳು ಕಾಮಗಾರಿಅರ್ಧಕ್ಕೆ ನಿಂತು ವರ್ಷಗಳೇ ಕಳೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಎಚ್ಚೆತ್ತುಗೊಂಡಿಲ್ಲ. ಕೆಲ ಅಂಗನ ವಾಡಿ ಕೇಂದ್ರಗಳು ಬಾಡಿಗೆ ಮನೆಗಳಲ್ಲಿ ನಡೆಯುತ್ತಿದ್ದು, ಸ್ವಂತ ಕಟ್ಟಡಕ್ಕಾಗಿ ಕಾಯುತ್ತಿವೆ.
***
ಮಳೆ ನಿಂತ ಮೇಲೆ ₹ 2 ಲಕ್ಷದಲ್ಲಿ ಪಟ್ಟಣದಲ್ಲಿ ನೂತನ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು.
ಆದಪ್ಪ ಸುರಪೂರಕರ್, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.