ADVERTISEMENT

ಪ್ರಾರಂಭೋತ್ಸವ: ಶಾಲೆಗೆ ತೋರಣ ಸಿಂಗಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:45 IST
Last Updated 1 ಜೂನ್ 2013, 10:45 IST

ಯಾದಗಿರಿ: ಜಿಲ್ಲೆಯ ವಿವಿಧೆಡೆ ಶಾಲೆಗಳ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು. ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸುವ ಮೂಲಕ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆಯುವ ಕಾರ್ಯಕ್ರಮ ನಡೆಯಿತು.

ಶಹಾಪುರ ತಾಲ್ಲೂಕಿನ ವಡಗೇರಾ, ದೋರನಳ್ಳಿ, ಖಾನಾಪುರ, ತಡಿಬಿಡಿ, ಗುಂಡಳ್ಳಿ, ಕುರುಕುಂದಾ, ನಾಯ್ಕಲ್, ಬಲಕಲ್, ನಾಲ್ವಡಿಗಿ, ಮರಮಕಲ್, ಉಳ್ಳೆಸುಗೂರ, ಗುರುಸುಣಿಗಿ, ಚಟ್ನಳ್ಳಿ, ಮಳ್ಳಳ್ಳಿ, ತೇಕರಾಳ , ಗುಂಡಗುರ್ತಿ, ಹುಂಡೆಕಲ್, ಕಾಡಂಗೇರಾ, ಬಬಲಾದ, ಹುಲಕಲ್, ಬಿರನಾಳ, ಗಡ್ಡೆಸುಗೂರ, ಹಾಲಗೇರಾ, ಹಯ್ಯೊಳ, ಐಕೂರ, ಬೆಂಡೆಬೆಂಬಳಿ, ಕದ್ರಾಪೂರ, ಬಿಳ್ಹಾರ, ತುಮಕೂರ, ಕೊಂಕಲ್, ಗೊಂದೆನೂರ ಮುಂತಾದ ಗ್ರಾಮಗಳಲ್ಲಿನ ಶಾಲೆಗಳು ತಳಿರು-ತೋರಣಗಳಿಂದ ಅಲಂಕಾರಗೊಳಿಸಿ, ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಶೈಕ್ಷಣಿಕ ವರ್ಷ ಆರಂಭೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಶಾಲೆಗಳಲ್ಲಿ ಶುಚಿಗೊಳಿಸಿ, ಮಾವಿ ಎಲೆ, ತೆಂಗಿನ ಗರಿಗಳ ತೋರಣಗಳಿಂದ ಸಿಂಗರಿಸಲಾಯಿತು. ಶಾಲಾ ಮಕ್ಕಳಿಗೆ  ಸಿಹಿ ಪದಾರ್ಥಗಳನ್ನು ಉಣ ಬಡಿಸಲಾಯಿತು. ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅಂಬೇಡ್ಕರ್ ನಗರ ಶಾಲೆ, ಉರ್ದು ಪ್ರಾಥಮಿಕ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.

ಶಾಲೆಯ ಮುಖ್ಯಾಧ್ಯಾಪಕ ಚೆನ್ನಬಸವಾನಂದ ವಡ್ವಡಿಗಿ, ಅಂಬೇಡ್ಕರ್ ನಗರ ಶಾಲೆಯ ಮುಖ್ಯಾಧ್ಯಾಪಕ ಅಶ್ಪಕ್ ಅಹ್ಮದ್, ಉರ್ದು ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಮುಮ್ತೋಜ್ ಬೇಗಂ, ಶಿಕ್ಷಕರಾದ ಮನೋಹರ ದರಬಾರಿ, ಗಿರೆಪ್ಪಗೌಡ, ಪರಶುರಾಮ, ಶಿಕ್ಷಕಿಯರಾದ ಸುನಂದಾ ಕುಲಕರ್ಣಿ, ಚೆನ್ನಮಲ್ಲಮ್ಮ, ಸಿದ್ದಮ್ಮ, ಸುಕನ್ಯ, ಶಾಂತಮ್ಮ, ಮಂಜುಳಾ, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ:   ನಾಯ್ಕಲ್ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಶುಕ್ರವಾರ ವಿತರಿಸಲಾಯಿತು. ಮೊದಲ ದಿನವಾಗಿದ್ದರಿಂದ ಶಾಲಾ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.