ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಬೆಳೆಯಾದ ಭತ್ತವು ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಜಮೀನುಗಳಲ್ಲಿ ಭತ್ತವು ತೆನೆ ಕಟ್ಟಿದ್ದು, ಹಸಿರು ಹೊದಿಕೆಯಂತೆ ಕಣ್ಣು ಹಾಯಿಸಿದಷ್ಟು ಕಾಣುತ್ತಿದೆ.
‘ಕೃಷ್ಣಾ ಭಾಗ್ಯ ಜಲ ನಿಗಮದ ಆದೇಶವನ್ನು ಲೆಕ್ಕಿಸದೆ ಭತ್ತ ನಾಟಿ ಮಾಡುವುದು ಹಲವು ವರ್ಷಗಳಿಂದ ಸಾಮಾನ್ಯವಾಗಿದೆ. ಪ್ರಸಕ್ತ ವರ್ಷ ಮಳೆ ಉತ್ತವಾಗಿದ್ದರಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಭರ್ತಿಯಾಗಿರುವುದು ರೈತರಿಗೆ ನೆಮ್ಮದಿ ನೀಡಿದೆ’ ಎನ್ನುತ್ತಾರೆ ರೈತ ಶಿವಪ್ಪ.
‘ವಾರಬಂದಿ ನಿಯಮ ಜಾರಿಯಿಂದ ಭತ್ತ ಬೆಳೆಗೆ ತೊಂದರೆಯಾಗುತ್ತದೆ ಎಂದು ರಾಜಕೀಯ ಮುಖಂಡರು ಧರಣಿ, ಹೋರಾಟವನ್ನು ಹಮ್ಮಿಕೊಂಡು ಭತ್ತ ಬೆಳೆಗಾರರ ಹಿತ ರಕ್ಷಣೆಗೆ ಮುಂದಾಗಿದ್ದರು. ಆದರೆ, ಹೆಚ್ಚು ಮಳೆ ಹಾಗೂ ನೀರಿನ ಬೇಡಿಕೆ ತಗ್ಗಿದ್ದರಿಂದ ವಾರಬಂದಿ ಸಮಸ್ಯೆ ತಾತ್ಕಾಲಿಕವಾಗಿ ಕರಗಿದೆ’ ಎನ್ನುತ್ತಾರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭೂಮಿ ಹೋರಾಟ ಸಮಿತಿ ಸಂಚಾಲಕ ಅಶೋಕ ಮಲ್ಲಾಬಾದಿ.
‘ಉತ್ತಮ ಮಳೆಯಾಗಿದ್ದರಿಂದ ಭತ್ತ ಬಂಪರ್ ಇಳುವರಿ ಬರುವ ನಿರೀಕ್ಷೆಯಿದೆ. ಅಲ್ಲದೆ ಹಿಂಗಾರು ಬೆಳೆ ಬಿತ್ತನೆಗೆ ನೀರು ಪೋಲಾಗದಂತೆ ರೈತರು ಹಾಗೂ ಅಧಿಕಾರಿಗಳು ಈಗಿನಿಂದಲೇ ಎಚ್ಚರಿಕೆವಹಿಸಬೇಕು’ ಎಂದು ರೈತ ಮುಖಂಡ ವಾಲ್ಮೀಕಿ ಹನುಂತಪ್ಪ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.