ADVERTISEMENT

ಮನೆ ಸೌಲಭ್ಯ: ನಡೆಯದ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:30 IST
Last Updated 1 ಜೂನ್ 2011, 5:30 IST

ಚಿತ್ತಾಪುರ: ಈ ತಿಂಗಳ 15 ರಿಂದ ಒಂದು ವಾರ ಕಾಲ ಪಟ್ಟಣದಲ್ಲಿ ನಡೆದ ಸಾರ್ವಜನಿಕ ರಸ್ತೆ ಒತ್ತುವರಿ ತೆರವು ಕಾರ‌್ಯಾಚರಣೆಯಲ್ಲಿ ರಸ್ತೆಯ ಪಕ್ಕದಲ್ಲಿರುವ ಕಡು ಬಡವರ ಮನೆಗಳು ಸಂಪೂರ್ಣ ಧ್ವಂಸಗೊಂಡಿವೆ. ಇಂತಹ ಕುಟುಂಬಗಳನ್ನು ಗುರುತಿಸಿ ಮನೆ ಸೌಲಭ್ಯ ನೀಡುವ ಸಂಬಂಧ ಕೊಟ್ಟ ಮಾತಿಗೆ ಪೂರಕವಾಗಿ ಪುರಸಭೆಯಿಂದ ಇನ್ನೂ ಸಮೀಕ್ಷೆ ಕಾರ‌್ಯ ಆರಂಭವಾಗಿಲ್ಲ ಎನ್ನುವ ಅಸಮಾಧಾನ ಸಂತ್ರಸ್ತರಲ್ಲಿ ಮನೆಮಾಡಿದೆ.

ಇರುವ ಮನೆಯನ್ನು ಕಳೆದುಕೊಂಡು ನಗರದ ಎಷ್ಟು ಜನರು ಸಂಪೂರ್ಣ ನಿರ್ಗತಿಕರಾಗಿ ಬೀದಿಗೆ ಬಂದಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಏನು ಮಾಡಬೇಕು ಎಂದು ವಿಚಾರಿಸಿ ತೆರವು ಕಾರ‌್ಯಾಚರಣೆ ನಡೆಸಿದ ತಹಸೀಲ್ದಾರ್ ಡಾ.ಎಸ್.ಎಲ್. ವಣಿಕ್ಯಾಳ್ ಪುರಸಭೆ ಮುಖ್ಯಾಧಿಕಾರಿ ಹನುಮಂತಗೌಡ ಅವರೊಂದಿಗೆ ಚರ್ಚಿಸಿದ್ದರು. ಈ ಸಂಬಂಧ ಆದಷ್ಟು ಬೇಗ ಸಮೀಕ್ಷೆ ನಡೆಸುವಂತೆ ಕಳೆದ 21 ರಂದೆ ಪುರಸಭೆಗೆ ಸೂಚಿಸಿದ್ದರು.

ಆಶ್ರಯ ಮತ್ತು ಕೊಳಚೆ ನಿರ್ಮೂಲನೆ ಯೋಜನೆ ಕಾಲೋನಿಯಲ್ಲಿ ನಿರ್ಗತಿಕರಾದ ಜನರಿಗೆ ಮನೆ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಣಿಕ್ಯಾಳ್ ಪುರಸಭೆ ಅಧಿಕಾರಿಗೆ ತಾಕೀತು ಮಾಡಿ ವಾರ ಗತಿಸಿದರೂ ಇನ್ನೂ ಆ ಕೆಲಸ ನಡೆಯುತ್ತಿಲ್ಲ. ಹೀಗಾದರೆ ನಮಗೆ ಪರ‌್ಯಾಯ ವ್ಯವಸ್ಥೆ ಇಲ್ಲವೆ ಪುನರ್ವಸತಿ ಯಾವಾಗ ಸಿಕ್ಕುತ್ತದೆ, ಎಲ್ಲವನ್ನೂ ಕಳೆದುಕೊಂಡ ನಾವು ಹೋಗುವುದಾದರೂ ಎಲ್ಲಿಗೆ ಎನ್ನುವ ಅಸಮಾಧಾನ ಸಂತ್ರಸ್ತರಿಂದ ವ್ಯಕ್ತವಾಗಿದೆ.

ಆಶ್ರಯ ಕಾಲೋನಿ ಮತ್ತು ಕೊಳಚೆ ನಿರ್ಮೂಲನೆ ಮಂಡಳಿ ಮನೆಗಳಲ್ಲಿ ಐದಾರು ಮನೆಗಳು ಖಾಲಿ ಇವೆ. ಅವುಗಳನ್ನು ತೆರವು ಕಾರ‌್ಯಾಚರಣೆಯಿಂದ ಮನೆ ಕಳೆದುಕೊಂಡಿರುವ ನಿರ್ಗತಿಕರಿಗೆ ನೀಡುವ ಕೆಲಸ ಮಾಡಬೇಕಾಗಿದೆ. ನಾಲ್ಕಾರು ಜನರು ಮನೆ ಕಳೆದುಕೊಂಡಿದ್ದೇವೆ ಎಂದು ನಮ್ಮ ಗಮನಕ್ಕೆ ತಂದಿದ್ದಾರೆ, ಸಮೀಕ್ಷೆ ಕೆಲಸ ಕೆಲವು ಅನಿವಾರ್ಯ ಕಾರಣಗಳಿಂದ ಆರಂಭವಾಗಿಲ್ಲ.

ಆದಷ್ಟು ಬೇಗ ಮನೆ ಕಳೆದುಕೊಂಡವರ ಸಮೀಕ್ಷೆ, ಮನೆ ನೀಡುವ ಬಗ್ಗೆ ಪರಿಶೀಲನೆ ಕಾರ‌್ಯ ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಗೌಡ ತಿಳಿಸಿದರು.ಮನೆ ಕಳೆದುಕೊಂಡವರ ಸಮೀಕ್ಷೆ, ಆಶ್ರಯ ಕಾಲೋನಿಯಲ್ಲಿ ಅರ್ಹರಿಗೆ  ಮನೆ ನೀಡಲು  ಅತಿ ಶೀಘ್ರದಲ್ಲಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಶಾಸಕ ವಾಲ್ಮೀಕ ನಾಯಕ ಒಂದು ವಾರದ ಹಿಂದೆಯೇ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.