ADVERTISEMENT

ಮೊಳಕೆಯೊಡಯದ ಹತ್ತಿ: ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 12:59 IST
Last Updated 9 ಜುಲೈ 2013, 12:59 IST

ಶಹಾಪುರ: ತಾಲ್ಲೂಕಿನ ಮುಡಬೂಳ ಗ್ರಾಮದ ಸುಮಾರು 150 ರೈತರು ಕಂಪನಿಯೊಂದರ ಹತ್ತಿ ಬೀಜವನ್ನು ಖರೀದಿಸಿ ನಾಟಿ ಮಾಡಿದ್ದರು. 15 ದಿನಗಳು ಗತಿಸಿದರು ಮೊಳಕೆಯೊಡೆದಿಲ್ಲ. ಲಕ್ಷಾಂತರ ಮೌಲ್ಯದ ಬೀಜ ಖರೀದಿಸಿದ ರೈತರು ಇದೀಗ ಕಂಗಾಲಾಗಿದ್ದಾರೆ.

ಪಟ್ಟಣದ ಪ್ರತಿಷ್ಠಿತ ವಿತರಕರ ಮೂಲಕ ಕಂಪನಿಯೊಂದರ ಬೀಜಗಳನ್ನು ಪ್ರತಿ ಪಾಕೇಟ್‌ಗೆ ರೂ 950.ಯಂತೆ ಖರೀದಿಸಿ 15 ದಿನಗಳ ಹಿಂದೆ ಬಿತ್ತನೆ ಮಾಡಿದ್ದೇವೆ. ಬೀಜಮಾತ್ರ ಮೊಳಕೆಯೊಡೆದಿಲ್ಲ.

ನಮ್ಮ ಹೊಲದ ಪಕ್ಕದಲ್ಲಿ ಬೇರೆ ಕಂಪನಿಯ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ ಹತ್ತಿ ಬೀಜ ಉತ್ತಮವಾಗಿ ಬೆಳೆದು ನಿಂತಿವೆ. ಕಂಪನಿಯವರು ನಮಗೆ ಮೋಸ ಮಾಡಿದ್ದಾರೆ ಎಂದು ಶೇಖಪ್ಪ ಮಣ್ಣೂರ ಆರೋಪಿಸಿದ್ದಾರೆ.

ಹತ್ತಿ ಬೀಜ ಮೊಳಕೆ ಒಡೆದಿಲ್ಲ ಸ್ಥಳ ಪರಿಶೀಲನೆ ಮಾಡಿ ಕಳಪೆ ಬೀಜ ಮಾರಾಟ ಮಾಡಿದ ಅಂಗಡಿ ಮಾಲಿಕ ಹಾಗೂ ಕಂಪನಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.

ಅದರಂತೆ ಎಚ್ಚೆತ್ತುಕೊಂಡು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಎಚ್.ಬಂಚನಾಳ ಹಾಗೂ  ಭೀಮರಾಯನಗುಡಿ ಕೃಷಿ ವಿಜ್ಞಾನಿಗಳ ಜೊತೆಗೂಡಿ ಸೋಮವಾರ ಹತ್ತಿ ಬಿತ್ತನೆ ಮಾಡಿದ ಹೊಲಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ದಂಗಾದರು. ಮೊದಲು ಬೀಜವನ್ನು ರೈತರಿಗೆ ನೀಡಿ ಎಂದು ಸ್ಥಳದಲ್ಲಿಯೇ ಹಾಜರಿದ್ದ ಕಂಪನಿಯ ವಿತರಕರಿಗೆ ತಾಕೀತು ಮಾಡಿದರು.

ಸ್ಥಳದಲ್ಲಿ ಬೀಜ ಮಾದರಿ, ಮಣ್ಣು, ರಸೀದಿ ಇನ್ನಿತರ ದಾಖಲೆಗಳನ್ನು ಪಡೆದುಕೊಂಡರು ಎಂದು ರೈತ ನಿಂಗಣ್ಣ ಗೋಪಾಳಿ ತಿಳಿಸಿದ್ದಾರೆ.
ಕಳಪೆ ಬೀಜವನ್ನು ಮಾರಾಟ ಮಾಡಿ ರೈತರನ್ನು ಮೋಸಗೊಳಿಸಿದ ಕಂಪನಿಯ ವಿರುದ್ಧ ಹಾಗೂ ಬೀಜ ವಿತರಣೆ ಮಾಡಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ತಿಪ್ಪಣ್ಣ ಚೆನ್ನೂರ, ಭೀಮಣ್ಣ ಹೊಸ್ಮನಿ, ಬಂಡಪ್ಪ ದೊರೆ, ನಾಗಣ್ಣ ಸಂಗ್ರಾವತಿ, ಅಂಬಣ್ಣ ನಾಯ್ಕೋಡಿ, ಕೃಷ್ಣಪ್ಪ ಹಳಿಸಗರ, ಬಸವರಾಜ ಮತ್ತಿತರರು ಆಗ್ರಹಿಸಿದ್ದಾರೆ.

ಸ್ಪಷ್ಟನೆ: ಮುಡಬೂಳ ಗ್ರಾಮದ ರೈತರು ಹತ್ತಿ ಬೀಜ ಮೊಳಕೆ ಒಡೆದಿಲ್ಲವೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೀಜದ ಶ್ಯಾಂಪಲ್ ಪಡೆದು ತನಿಖೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಸ್.ಹೈಬತ್ತಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.