ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನಗಳ ಸಹಯೋಗದಲ್ಲಿ ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಅಭಿಯಾನವನ್ನು ಆ. 8 ರಿಂದ 14 ರವರೆಗೆ ಆಯೋಜಿಸಲಾಗಿದೆ
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ, ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಬಸವರಾಜ ಮೋಟ್ನಳ್ಳಿ, ಈ ಹಿಂದೆ ಉಭಯ ಸಂಘಟನೆಗಳಿಂದ ಗಡಿನಾಡಿನಲ್ಲಿ ಜ್ಞಾನಪೀಠ ಗಾರುಡಿಗರ ದರ್ಶನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಶಸ್ವಿಯಾಗಿದೆ.
ಅದೇ ಮಾದರಿಯಲ್ಲಿ ಯಾದಗಿರಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಪ್ರೌಢಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರ ಕಾಳಜಿ ಮೂಡಿಸುವುದು, ಪರಿಸರ ಪ್ರೇಮ ಬೆಳೆಸುವುದು, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿಟ್ಟಿನಲ್ಲಿ ವಿನೂತನ ಪರಿಸರ ಜಾಗತಿ ಅಭಿಯಾನ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆಗಸ್ಟ 8 ರಂದು ಬೆಳಿಗ್ಗೆ 10.30 ಕ್ಕೆ ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ತಂಗಡಗಿ ಉದ್ಘಾಟಿಲಿಸಿದ್ದು, ತನಾರತಿ ಸಂಸ್ಥೆಯ ಅಧ್ಯಕ್ಷ ಸಿದ್ಧರಾಜ ರಡ್ಡಿ, ಉಪನ್ಯಾಸ ನೀಡಲಿದ್ದಾರೆ. ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಶಿಕ್ಷಣ ಸಂಯೋಜಕ ಜ್ಞಾನೇಶ್ವರ ಸಂದೇನಕರ, ವಲಯ ಅರಣ್ಯಾಧಿಕಾರಿಗಳಾದ ರಾಮಕೃಷ್ಣ ಯಾದವ, ಅನಿಕೇತನ ಟ್ರಸ್ಟ್ ಅಧ್ಯಕ್ಷ ಮಲ್ಲೇಶ ಕುರಕುಂದಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಲೆಯ ಪ್ರಾಂಶುಪಾಲ ಫಾ. ಸಜ್ಜಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಆ.9 ರಂದು ಹತ್ತಿಕುಣಿಯ ಸರ್ಕಾರಿ ಪ್ರೌಢಶಾಲೆ, ಆ. 10 ರಂದು ಕಂದಕೂರಿನ ಸರ್ಕಾರಿ ಪ್ರೌಢಶಾಲೆ, 13 ರಂದು ಸೈದಾಪೂರದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ, 14 ರಂದು ಕೊಂಕಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸದರು. ಕಸಾಪ ಮಾಜಿ ಅಧ್ಯಕ್ಷರಾದ ಅಯ್ಯಣ್ಣ ಹುಂಡೆಕಾರ್, ವಿ.ಸಿ. ರಡ್ಡಿ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ರಾಜು ಹಂದೆ, ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.