ADVERTISEMENT

ರಸ್ತೆಯುದ್ದಕ್ಕೂ ಗುಂಡಿಗಳು, ಪ್ರಯಾಣವೇ ಪ್ರಯಾಸ

ಮಲ್ಲಿಕಾರ್ಜುನ ಪಾಟೀಲ್, ಚಪೆಟ್ಲಾ
Published 23 ಅಕ್ಟೋಬರ್ 2017, 10:32 IST
Last Updated 23 ಅಕ್ಟೋಬರ್ 2017, 10:32 IST
ಗುರುಮಠಕಲ್ ಪಟ್ಟಣದಿಂದ ಗಾಜರಕೋಟ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳು
ಗುರುಮಠಕಲ್ ಪಟ್ಟಣದಿಂದ ಗಾಜರಕೋಟ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳು   

ಗುರುಮಠಕಲ್: ಕರ್ನಾಟಕದ ಪ್ರತಿಷ್ಠಿತ ಮತಕ್ಷೇತ್ರಗಳಲ್ಲಿ ಒಂದಾಗಿದ್ದ ಗುರುಮಠಕಲ್ ಮತಕ್ಷೇತ್ರದ ಗುರುಮಠಕಲ್ ಹೋಬಳಿ ವ್ಯಾಪ್ತಿಯಲ್ಲಿ ರಸ್ತೆ ಸಂಚರಿಸುವುದು ಸರ್ಕಸ್ ಮಾಡಿದ ಅನುಭವ ನೀಡುತ್ತಿದೆ. ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು.

ನಜರಾಪೂರ, ಮಿನಾಸಪೂರ, ಅಮ್ಮಪಲ್ಲಿ, ಮುಸ್ಲೇಪಲ್ಲಿ, ಇಂದಿರಾನಗರ, ಕಮಲಾಮಗರ, ಹಿಮಾಲಪೂರ, ಹಿಮಾಲಪೂರ ತಾಂಡಾ, ಚಿಂತರಪಲ್ಲಿ, ರಾಂಪೂರ, ಶಿವಪೂರ, ಕೋಟಗೇರಾ, ಗಾಜರಕೋಟ, ಹೊಸಳ್ಳಿ, ಚಿನ್ನಾಕಾರ, ಮೋಟನಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಯಾರೊಬ್ಬರೂ ರಸ್ತೆ ದುರಸ್ತಿಗೆ ಬಗ್ಗೆ ಯೋಚಿಸಿಲ್ಲ.

‘ಯಾವುದೇ ಪ್ರದೇಶ ವ್ಯಾಪಾರದ ದೃಷ್ಟಿಯಿಂದ, ಆರ್ಥಿಕತೆಯ ದೃಷ್ಟಿಯಿಂದ ಅಭಿವೃದ್ಧಿ ಹೊಂದಲು ಮೂಲ ಸೌಕರ್ಯಗಳು, ಸ್ಥಳೀಯ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಪ್ರಮುಖವಾದದ್ದು. ಇದರ ಜತೆಗೆ ಸಾರಿಗೆ ಸಂಪರ್ಕದ ಜಾಲವೂ ಪ್ರಮುಖ ಪಾತ್ರವಹಿಸುತ್ತದೆ.

ADVERTISEMENT

ಯಾವ ಪ್ರದೇಶಕ್ಕೆ ಉತ್ತಮ ಸಾರಿಗೆ ಸಂಪರ್ಕ ಸಾಧ್ಯವಿಲ್ಲವೋ ಅಂತಹ ಪ್ರದೇಶಗಳು ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿಯುವುದು ಬಹುತೇಕ ಖಚಿತ. ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಬೇಕು’ ಎನ್ನುತ್ತಾರೆ ಅರ್ಥಶಾಸ್ತ್ರ ಉಪನ್ಯಾಸಕ ವೀರೇಶ ಆವಂಟಿ.

’5 ಕಿ.ಮೀ ಹಾದಿಯ ರಸ್ತೆಯನ್ನು ಕ್ರಮಿಸಲು ಸಾಮಾನ್ಯವಾಗಿ 10ರಿಂದ 15 ನಿಮಿಷದ ಸಮಯ ತಗುಲುತ್ತದೆ. ಆದರೆ, ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ‘ನಮ್ಮೂರಿಂದ 5 ಕಿ.ಮೀ ದೂರದ ಗುರುಮಠಕಲ್ ಪಟ್ಟಣಕ್ಕೆ ಬರಲು ಬರೋಬ್ಬರಿ 40 ನಿಮಿಷ ಬೇಕಾಗುತ್ತದೆ’ ಎನ್ನುತ್ತಾರೆ ರಾಮಯ್ಯ, ವೆಂಕಟಪ್ಪ, ಮೌನೇಶ ಹಾಗೂ ಸಿದ್ದಣ್ಣ.

ಮತಕ್ಷೇತ್ರದಲ್ಲಿ ರಸ್ತೆಗಳಲ್ಲಿ ಸಂಚರಿಸುವುದು ಎಂದರೆ ಮುಖ ಕಿವುಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂದರೆ ರಸ್ತೆ ಸಂಚಾರವೇ ಬೇಡ ಎನ್ನುವಂತಾಗಿದೆ. ಈ ರಸ್ತೆಗಳಲ್ಲಿ ಅಫಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಅಫಘಾತದ ಸ್ಥಳಕ್ಕೆ ಅಂಬುಲೆನ್ಸ್ ಬರುವುದು ಕಷ್ಟಕರವಾಗಿದೆ. ಗರ್ಭಿಣಿಯರನ್ನು, ರೋಗಿಗಳನ್ನು, ಮುದುಕರನ್ನು ಹಳ್ಳಿಗಳಿಂದ ಪಟ್ಟಣಕ್ಕೆ ತರುವುದು ಸಾಹಸದ ಕೆಲಸದಂತಾಗಿದೆ’ ಎನ್ನುತ್ತಾರೆ ನರಸಿಂಹ, ಅಮರ, ಮಲ್ಲಿಕಾರ್ಜುನಪ್ಪ ಹಾಗೂ ಸಿ.ಎಂ.ಮಹಾದೇವ.

ಹೆದ್ದಾರಿಯೂ ಹೊರತಾಗಿಲ್ಲ: ವಿಜಯಪುರ- ಹೈದರಾಬಾದ್ ರಾಜ್ಯ ಹೆದ್ದಾರಿಯೂ ಗುಂಡಿಗಳಿಂದ ಮುಕ್ತವಾಗಿಲ್ಲ. ಬೋರಬಂಡಾ, ಧರ್ಮಾಪೂರ, ಬೆಟ್ಟದಹಳ್ಳಿ, ಚಿನ್ನಾಕರ ಗ್ರಾಮಗಳ ಹತ್ತಿರದಲ್ಲಿ ಗುಂಡಿಗಳು ಬಿದ್ದಿದ್ದು ಹೆದ್ದಾರಿಯೂ ಸುಗಮ ಸಂಚಾರಕ್ಕೆ ಅನುಕೂಲವಾಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.