ಶಹಾಪುರ: ಸುರಪುರ ಸಂಸ್ಥಾನದಲ್ಲಿ ಆಡಳಿತಾಧಿಕಾರಿಯಾಗಿದ್ದ (1841-1854) ಫಿಲಿಪ್ ಮೇಡೋಸ್ ಟೇಲರ್ ಅವಧಿಯಲ್ಲಿ ಅಚ್ಚಳಿಯದೆ ಇಂದಿಗೂ ಇರುವ ಇತಿಹಾಸದ ಸ್ಮಾರಕದ ಸಾಕ್ಷಿ ಪ್ರಜ್ಞೆಯಾಗಿರುವ ಸುರಪುರ ಟೇಲರ್ ಮಂಜಿಲ್ ಹಾಗೂ ಬೋನಾಳ ಪಕ್ಷಿಧಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂದು ಮೇಡೋಸ್ ಟೇಲರ್ ಮರಿಮೊಮ್ಮಗ ಡಾ.ಅಲ್ಬರ್ಟೋ ಟೇಲರ್ ಜಿಲ್ಲಾಧಿಕಾರಿ ಗುರುನೀತ ತೇಜ್ ಮೇನೆನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಪತ್ರ ಬರೆದು ಮನವಿ ಮಾಡಿದ್ದಾರೆ.
ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಸಂಚಾಲಕರಾದ ಭಾಸ್ಕರರಾವ ಮುಡಬೂಳರಿಗೂ ಇದರ ಹೊಣೆಯನ್ನು ನಿರ್ವಹಿಸಲು ಪತ್ರ ಬರೆದು ನಿವೇದಿಸಿದ್ದಾರೆ.
ಕಳೆದ 4ರಿಂದ ಮೂರು ದಿನಗಳ ಕಾಲ ಸುರಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಭಾವುಕರಾಗಿದ್ದಾರೆ. ಬೋನಾಳ ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಣ್ಣಾರೆ ಕಂಡ ದೃಶ್ಯಗಳನ್ನು ಅಕ್ಷರ ರೂಪದಲ್ಲಿ ಬರೆದಿಟ್ಟದ್ದಾರೆ. ಬೋನಾಳ ಕೆರೆ ಅದ್ಭುತವಾದ ತಾಣವಾಗಿದೆ. ವಾಯು ವಿಹಾರಕ್ಕೆ ತೆರಳಿ ಟೇಲರ್ ಕುಳಿತುಕೊಳ್ಳುವ ಸ್ಥಳವು ಅಮೋಘವಾದುದ್ದು. ವಿಷಾದನೀಯ ಸಂಗತಿಯೆಂದರೆ ಗುಡ್ಡದ ಎತ್ತರ ಪ್ರದೇಶದಲ್ಲಿರುವ ಕಾಟೇಜ್ ಹಾಳಾಗಿದೆ. ಒಂದಿಷ್ಟು ಕಲ್ಲುಮಣ್ಣಿನ ರಾಶಿ ಮಾತ್ರ ಕಾಣುತ್ತದೆ. ತುರ್ತಾಗಿ ಅಲ್ಲಿ ಗೆಸ್ಟ್ಹೌಸ್ ನಿರ್ಮಿಸಬೇಕು. ದೋಣಿ ವಿಹಾರಕ್ಕೆ ಸೂಕ್ತ ಸ್ಥಳವನ್ನು ಅಭಿವೃದ್ಧಿಪಡಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ಅತ್ಯಂತ ನೋವಿನಿಂದ ಹೇಳುತ್ತಿರುವುದು ಸುರಪುರದಿಂದ ಬೋನಾಳ ಕೆರೆ ತೆರಳು ರಸ್ತೆ ಮಾರ್ಗ ತುಂಬಾ ಹದಗೆಟ್ಟು ಹೋಗಿದೆ. ಇದು ಬೇಸರದ ಸಂಗತಿ. ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲು ಸಲಹೆ ಮಾಡಿದ್ದಾರೆ.
ಸುರಪುರ ಬೆಟ್ಟದ ಮೇಲೆ 1844ರಲ್ಲಿ ನಿರ್ಮಿಸಿರುವ ಟೇಲರ್ ಮಂಜಿಲ್ ಕಟ್ಟಡ ಹಾಗೂ ಅದರ ವಿನ್ಯಾಸ ನೋಡಿ ದಂಗಾಗಿರುವೆ. ಇಂದಿಗೂ ಅದನ್ನು ಜತನದಿಂದ ಕಾಪಾಡಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ.
ಇತಿಹಾಸ ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಬೇಕು. ಅತಿಥಿಗೃಹವನ್ನು ತೆಗೆದು ಹಾಕಬೇಕು. ಸುತ್ತಮುತ್ತಲಿನ ಪ್ರದೇಶವನ್ನು ಇನ್ನೂ ಸ್ವಚ್ಛ ಮತ್ತು ಮರಗಳನ್ನು ಬೆಳೆಸಬೇಕು. ಅಂದು ನಮ್ಮ ಅಜ್ಜನವರು ಬಳಕೆ ಮಾಡಿದ ಕುರ್ಚಿ, ಟೀಪಾಯ್ ಇನ್ನಿತರ ವಸ್ತುಗಳನ್ನು ಪ್ರಾಚ್ಯವಸ್ತು ಇಲಾಖೆಯಿಂದ ಪಡೆದು ಟೇಲರ್ ಮಂಜಿಲ್ನಲ್ಲಿಯೇ ಸಂಗ್ರಹಿಸಿಡಬೇಕೆಂದು ಅವರು ನಿವೇದಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.