ADVERTISEMENT

ರಾಷ್ಟ್ರ ಸುಧಾರಕರನ್ನು ಸ್ಮರಿಸಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 6:20 IST
Last Updated 18 ಜನವರಿ 2012, 6:20 IST

ಸುರಪುರ: ನಮ್ಮ ದೇಶದಲ್ಲಿ ಜನ್ಮ ತಾಳಿದ ಅನೇಕ ಮಹನೀಯರು ಸಮಾಜ ಸುಧಾರಣೆಯಲ್ಲಿ ಅಮೋಘ ಕೊಡುಗೆ ನೀಡಿದ್ದಾರೆ. ಅವರಲ್ಲಿ ಸ್ವಾಮಿ ವಿವೇಕಾನಂದ ಮತ್ತು ಎಂ. ಜಿ. ರಾನಡೆ ವಿಶಿಷ್ಟವಾಗಿ ನಿಲ್ಲುತ್ತಾರೆ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅವರನ್ನು ನಿರಂತರ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ರೈತ ಮುಖಂಡ ಡಾ. ಶರಣಪ್ಪ ಯಾಳಗಿ ಹೇಳಿದರು.

ಇಲ್ಲಿನ ಪ್ರಿಯದರ್ಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಮತ್ತು ಎಂ. ಜಿ. ರಾನಡೆ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಪ್ರಾಸ್ತಾವಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ, 1842 ಜನವರಿ 17ರಂದು ಮಹಾರಾಷ್ಟ್ರದ ನಾಸಿಕ್‌ದಲ್ಲಿ ಜನಿಸಿದ ರಾನಡೆ ನ್ಯಾಯವಾದಿಯಾಗಿ, ಸಾಹಿತ್ಯ ಪರಿಚಾರಕರಾಗಿ, ಸಾಂಸ್ಕೃತಿಕ ವ್ಯಕ್ತಿಯಾಗಿ, ಸಮಾಜ ಸುಧಾರಕರಾಗಿ ಹೆಸರು ಮಾಡಿದ್ದಾರೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದು ವಿವರಿಸಿದರು.

ತಾಲ್ಲೂಕು ವೀರಶೈವ ಸಮಾಜದ ಕಾರ್ಯದರ್ಶಿ ಶಿವಶರಣಪ್ಪ ಹೆಡಗಿನಾಳ, ಸಾಹೇಬಗೌಡ ದೀವಳಗುಡ್ಡ, ನಾನಾಗೌಡ ಮಾಳನೂರ ವೇದಿಕೆಯಲ್ಲಿದ್ದರು.

ಮುಖ್ಯ ಗುರು ಪ್ರಕಾಶ ಬಾವೂರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಸತ್ಯಂಪೇಟೆ ಸ್ವಾಗತಿಸಿದರು. ಮೋತಿಲಾಲ ನಾಯಕ್ ನಿರೂಪಿಸಿದರು. ಸಣ್ಣಸಾಹೇಬರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.