ADVERTISEMENT

ಲಕ್ಷ್ಮಿಪುರದಲ್ಲಿ ಮೂಲಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 9:45 IST
Last Updated 29 ಅಕ್ಟೋಬರ್ 2017, 9:45 IST

ಸುರಪುರ: ‘ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಹಿರಿಯ ಗಾಂಧಿವಾದಿ ಹೈಯಾಳಪ್ಪ ಮಲ್ಕಪ್ಪ ಕಡಿಮನಿ ಆರೋಪಿಸಿದ್ದಾರೆ. ‘ಗ್ರಾಮ ಪಂಚಾಯಿತಿಯವರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಸರ್ಕಾರದಿಂದ ಪಂಚಾಯಿತಿ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ಅನೇಕ ಸಲ ಮೇಲಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದ್ದಾರೆ.

‘ಗ್ರಾಮದಲ್ಲಿ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಎಲ್ಲೆಡೆ ಅಸ್ವಚ್ಛತೆ ರಾರಾಜಿಸುತ್ತಾ ಊರು ತುಂಬೆಲ್ಲಾ ದುರ್ಗಂಧದ ವಾಸನೆ ಬರುತ್ತದೆ. ಗ್ರಾಮದಲ್ಲಿ ಶೌಚಾಲಯ ಇದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಬೀದಿ ದೀಪಗಳ ವ್ಯವಸ್ಥೆ ಇಲ್ಲವಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಿಗೆ, ಬಡವರಿಗೆ ಕೆಲಸ ನೀಡುತ್ತಿಲ್ಲ. ಡಾ.ಬಾಬು ಜಗಜೀವನರಾಂ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ’ ಎಂದು ತಿಳಿಸಿದ್ದಾರೆ.

‘ಗ್ರಾಮದ ಸರ್ಕಾರಿ ಶಾಲೆಯಲ್ಲಿಯೂ ಶಿಕ್ಷಕರ ಸಮಸ್ಯೆ ಗಂಭೀರವಾಗಿದೆ. ಶಾಲಾ ಮಕ್ಕಳಿಗೆ ಸಮರ್ಪಕವಾಗಿ ಸೌಕರ್ಯಗಳು ಸಿಗುತ್ತಿಲ್ಲ. ಇದುವರೆಗೂ ಗ್ರಾಮ ಸಭೆ ನಡೆದಿಲ್ಲ. ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ಕೊಟ್ಟಿಲ್ಲ. ಸಂಬಂಧಿಸಿದವರು ಈ ಕುರಿತು ಕ್ರಮ ಜರುಗಿಸಬೇಕು’ ಎಂದು ಕಡಿಮನಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.