ADVERTISEMENT

ವಾಡಿ: ನರ್ಸ್‌ಗಳೇ ಇಲ್ಲಿ ವೈದ್ಯರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 9:35 IST
Last Updated 14 ಅಕ್ಟೋಬರ್ 2011, 9:35 IST

ವಾಡಿ: ಸುರಕ್ಷೀತ ಮತ್ತು ಸ್ವಚ್ಚತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಆರೋಗ್ಯ ಕೇಂದ್ರವೇ ದುರ್ವಾಸನೆ ಮತ್ತು ತ್ಯಾಜ್ಯ ವಸ್ತುಗಳಿಂದ ಕೂಡಿ ಗಬ್ಬು ನಾರುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯ ಬದಲು ನರ್ಸಗಳೇ ಇಲ್ಲಿ ಚಿಕಿತ್ಸೆ ನೀಡುತ್ತಾರೆ. ಹೌದು ಇದು ವಿಚಿತ್ರವಾದರೂ ಸತ್ಯದ ಸಂಗತಿ.

ಪಟ್ಟಣದ ಹೊರ ವಲಯದಲ್ಲಿ 1ಕೋಟಿ ವ್ಯಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ 40ಕೋಣೆ ಹೊಂದಿದ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ ಇದು. ಇನ್ನೂ ಈ ಕೇಂದ್ರಕ್ಕೆ ಉದ್ಘಾಟನೆ ಭಾಗ್ಯ ಒದಗಿ ಬಂದಿಲ್ಲ ಆಗಲೇ ನೂರಾರು ಸಮಸ್ಯೆಗಳು ಎದಿರುಸುತ್ತಿದೆ. ಶೌಚಾಲಯ ಕೋಣೆ ಗಬ್ಬುನಾರುತ್ತಿದೆ. ಆಸ್ಪತ್ರೆ ಸುತ್ತ ತ್ಯಾಜ್ಯ ವಸ್ತುಗಳು, ಗಿಡಗಂಟಿಗಳು ಬೆಳೆದಿವೆ. ಕುಡಿಯುವ ನೀರಿನ ಟ್ಯಾಂಕ್ ಇದೆ. ಆದರೆ ನೀರು ಇಲ್ಲ.

ಆಸ್ಪತ್ರೆಯಲ್ಲಿ ವೈದ್ಯರು ಇಲ್ಲಂತಿಲ್ಲ. ಆಸ್ಪತ್ರೆ ದಾಖಲೆ ಪ್ರಕಾರ 32 ಸಿಬ್ಬಂದಿ, ಆದರೆ ಇಲ್ಲಿ ಕೆಲವೆ ಸಿಬ್ಬಂದಿ ಮಾತ್ರ ಕೆಲಸ ನಿರ್ವಾಹಿಸುತ್ತಾರೆ. 3 ನರ್ಸ್‌ಗಳು ಮತ್ತು ಇಬ್ಬರು ವೈದ್ಯರು. ಡಾ. ಅಮೃತ ಹಾಗೂ ಖಾಜಾಮೈನೊದ್ದಿನ್ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರಲ್ಲಿ ಮುಸುಕಿನ ಗುದ್ದಾಟ ಇದೆ ಎಂದು  ಇಲ್ಲಿನ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ ಹೇಳುತ್ತಾರೆ.

ಇವರ ಮುಸುಕಿನ ಗುದ್ದಾಟದಲ್ಲಿ ರೋಗಿಗಳು ಪರದಾಡುವಂತಾಗಿದೆ. ಗುರುವಾರ ಪ್ರಜಾವಾಣಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದದ್ದು ಎಂತವರು ತಲೆ ತಗ್ಗಿಸ ಬೇಕಾದಂತ ದೃಶ್ಯಗಳು. ಅಲ್ಲಿ ಸಾಲು ಗಟ್ಟಿ ನಿಂತ ಹೆಣ್ಣು ಮಕ್ಕಳಿಗೆ ಅರೆ ಬರೆ ಕಲಿತ ನರ್ಸ್ ಯಾಲಿಮಾ ಚಿಕಿತ್ಸೆ ನೀಡುತ್ತಿದ್ದರು. 

ಬೆಳಿಗ್ಗೆ 9ಗಂಟೆಗೆ ವಿವಿಧ ಗ್ರಾಮಗಳಿಂದ ಬಂದ ರೋಗಿಗಳಿಗೆ ಮಧ್ಯಾಹ್ನವಾದರು ಚಿಕಿತ್ಸೆ ನೀಡಲಿಲ್ಲ. ಡಾಕ್ಟರೂ ಸಾಹೆಬ್ರೂ ಬೆಳಿಗ್ಗೆ ಬಂದು ನೀವು ನರ್ಸ್‌ಗಳ ಹತ್ತಿರ ತೊರಿಸಿ ಕೊಳ್ಳಿ ಎಂದಿದ್ದಾರೆ ಎಂದು ಖಾಜಾಬಿ ಕಡಬೂರ, ವಿಜಯಲಕ್ಷ್ಮೀ ಬಳವಡಿಗಿ, ಶಸಿಕಲಾ ವಾಡಿ ತಿಳಿಸಿದರು.

ಬೆಳಿಗ್ಗೆ 10ಗಂಟೆಗೆ ವೈದ್ಯ ಖಾಜಾಮೈನೊದ್ದಿನ್ ಆಸ್ಪತ್ರೆಗೆ ಬಂದು ಹಾಜರಿ ಹಾಕಿ ಖಾಸಗಿ ಕೆಲಸದತ್ತ ತೆರಳಿದ್ದಾರೆ. ಇನ್ನೊರ್ವ ವೈದ್ಯ ಅಮೃತಗೆ ದೂರವಾಣಿ ಮೂಲಕ ವಿಚಾರಿಸಿದರೆ ಗುಲ್ಬರ್ಗದಲ್ಲಿ ತರಬೇತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.