ADVERTISEMENT

`ವ್ಯಾಜ್ಯಗಳು ಹೆಚ್ಚಲು ಕಾನೂನು ಅಜ್ಞಾನ ಕಾರಣ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:38 IST
Last Updated 6 ಏಪ್ರಿಲ್ 2013, 9:38 IST

ಸುರಪುರ: ವ್ಯಾಜ್ಯಗಳು ಹೆಚ್ಚಾದಷ್ಟು ಮಾನಸಿಕ ನೆಮ್ಮದಿ ಹೊರಟು ಹೋಗುತ್ತದೆ. ಜೊತೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಕುಗ್ಗಬೇಕಾಗುತ್ತದೆ. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದೂ ದೇಶದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗುತ್ತದೆ. ವ್ಯಾಜ್ಯಗಳು ಹೆಚ್ಚಾಗಲು ಕಾನೂನಿನ ಬಗ್ಗೆ ತಿಳಿವಳಿಕೆ ಇರದಿರುವುದೆ ಕಾರಣವಾಗಿದೆ.

ಕಾನೂನಿನ ಅರಿವು ಮೂಡಿದಾಗ ವ್ಯಾಜ್ಯಮುಕ್ತ ಸಮಾಜ ನಿರ್ಮಾಣವಾಗುತ್ತದೆ ಎಂದು ನ್ಯಾಯಾಧೀಶೆ ಮಂಜುಳಾ ಉಂಡಿ ಪ್ರತಿಪಾದಿಸಿದರು. ಸಂಚಾರಿ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥ ಜಾಥಾದ ಸಮಾರೋಪ ಸಮಾರಂಭದ ಅಂಗವಾಗಿ ಸುರಪುರದ ರಂಗಂಪೇಟೆಯ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು

ಪ್ರತಿಯೊಬ್ಬ ಪ್ರಜೆ ನ್ಯಾಯದ ಚೌಕಟ್ಟಿನಲ್ಲಿ ನಡೆದು ಪ್ರಾಮಾಣಿಕತೆ, ದಕ್ಷತೆ ಮೈಗೂಡಿಸಿಕೊಂಡು ನಡೆದರೆ ಯಾವುದೆ ಕಾನೂನಿನ ಅವಶ್ಯಕತೆ ಇಲ್ಲ. ಮೌಲ್ಯ, ನೈತಿಕತೆಯುಳ್ಳ ನಡೆ ನುಡಿಗಿಂತ ಮಿಗಿಲಾದ ಕಾನೂನು ಇಲ್ಲ. ಕಾನೂನಿನ ಬಗ್ಗೆ ಸರ್ವರೂ ಕನಿಷ್ಟ ಜ್ಞಾನವನ್ನಾದರೂ ಪಡೆದುಕೊಳ್ಳಬೇಕು. ಕಾನೂನು ಅರಿವು ನೆರವು ಕಾರ್ಯಕ್ರಮಗಳು ಈ ನಿಟ್ಟನಲ್ಲಿ ನಿಮಗೆ ಸಹಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು.

ಸಂಚಾರಿ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥ ಜಾಥಾದ ಅಂಗವಾಗಿ ಕಳೆದ ಮೂರು ದಿನಗಳಿಂದ ವಿವಿಧೆಡೆ ಒಟ್ಟು 9 ಕಾರ್ಯಕ್ರಮಗಳನ್ನು ಆಯೋಜಿಸ್ದ್ದಿದೆವು. ವಕೀಲರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕರ ನೆರವಿನಿಂದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಇದರಿಂದ ಜಾಥಾದ ಉದ್ದೇಶ ಸಫಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ವಿ. ಸಿ. ಪಾಟೀಲ, ವಕೀಲರಾದ ನಿಂಗಣ್ಣ ಚಿಂಚೋಡಿ, ಸುಗೂರ ಸಿದ್ರಾಮಪ್ಪ, ಸಾಹಿತಿಗಳಾದ ಶಾಂತಪ್ಪ ಬೂದಿಹಾಳ, ನಾಗಪ್ಪ ತ್ರಿವೇದಿ ಮಾತನಾಡಿದರು.ಗ್ರಾಹಕರ ಹಕ್ಕು ರಕ್ಷಣೆ ಕಾಯ್ದೆಯ ಬಗ್ಗೆ ನಂದನಗೌಡ ಪಾಟೀಲ, ಮಹಿಳೆಯರ ಆಸ್ತಿಯಲ್ಲಿ ಹಕ್ಕು ಕಾಯ್ದೆಯ ಬಗ್ಗೆ ಗೋಪಾಲ ತಳವಾರ ವಿಶೇಷ ಉಪನ್ಯಾಸ ನೀಡಿದರು.

ಯಂಕಾರೆಡ್ಡಿ ಬೋನ್ಹಾಳ ಪ್ರಾಸ್ತಾವಿಕ ಮಾತನಾಡಿದರು. ಸಂಗಣ್ಣ ಗುಳಗಿ ಸ್ವಾಗತಿಸಿದರು. ಗುರುಪಾದಪ್ಪ ನಿರೂಪಿಸಿ, ವಂದಿಸಿದರು.
ಸ್ವಕುಲಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ ಪಾಡಮುಖಿ, ಜ್ಞಾನದೇವ ಪಾಣಿಭಾತೆ, ವಕೀಲರಾದ ಜಿ. ಎಸ್. ಪಾಟೀಲ, ದೇವಿಂದ್ರಪ್ಪ ಬೇವಿನಕಟ್ಟಿ, ಜಿ. ತಮ್ಮಣ್ಣ, ವಿ. ಎಸ್. ಬೈಚಬಾಳ, ಮನೋಹರ ಕುಂಟೋಜಿ, ಮಂಜುನಾಥ ಗುಡಗುಂಟಿ, ಮಂಜುನಾಥ ಹುದ್ದಾರ, ಮಲ್ಲು ಮಂಗಿಹಾಳ, ಬಲಭೀಮನಾಯಕ್, ರಮಾನಂದ ಕವಲಿ, ಸಿ. ವೈ. ಸಾಲಿಮನಿ, ವಿಶ್ವಾಮಿತ್ರ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT