ಯಾದಗಿರಿ: ಉತ್ತರಾಖಂಡ ಭೀಕರ ಜಲಪ್ರಳಯದ ಸಂತ್ರಸ್ತರ ನೆರವಿಗೆ ಮುಂದಾಗಿರುವ ತಾಲ್ಲೂಕಿನ ಸೈದಾಪುರದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸೋಮವಾರ ಗ್ರಾಮದಲ್ಲಿ ಪರಿಹಾರ ನಿಧಿ ಸಂಗ್ರಹಿಸಿದರು.
ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೇದರಾನಾಥ ಮತ್ತು ಬದರಿನಾಥ ದೇವಾಲಯಗಳು ಸಂಪೂರ್ಣವಾಗಿ ಹಾಳಾಗಿವೆ. ಯಾತ್ರೆಗೆ ಹೋದ ಸಾವಿರಾರು ಭಕ್ತರು ಮೃತಪಟ್ಟಿದ್ದು, ಬದುಕುಳಿದ ಹಲವರು ಊಟ, ನೀರಿಲ್ಲದೇ ಪರದಾಡುತ್ತಿದ್ದಾರೆ. ನೆರೆ ಸಂತ್ರಸ್ತರ ನೆರವಿಗಾಗಿ ಶಾಲೆಯ ಮಕ್ಕಳು ಪರಿಹಾರ ನಿಧಿ ಸಂಗ್ರಹಿಸುವ ಮೂಲಕ ಮಾನವೀಯತೆ ಮೆರೆದರು.
ಶಾಲೆಯ ಮುಖ್ಯಾಧ್ಯಾಪಕ ರಾಘವೇಂದ್ರ ನಾಯಕ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವ ಧರ್ಮ. ಅದರಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೆದಾರನಾಥ ಮತ್ತು ಬದರಿನಾಥ ಯಾತ್ರಿಕರಿಗಾಗಿ ಪಟ್ಟಣದಲ್ಲಿ ನಿಧಿ ಸಂಗ್ರಹಿಸಲಾಗಿದೆ. ಸಾಧ್ಯವಾದ ಮಟ್ಟಿಗೆ ಅಳಿಲು ಸೇವೆ ಮಾಡಿದ್ದೇವೆ ಎಂದರು.
ಇದೆಲ್ಲಕ್ಕಿಂತ ಮುಖ್ಯವಾಗಿ ಉದಾರ ಮನಸ್ಸಿನಿಂದ ದೇಣಿಗೆ ನೀಡಿದ ಸೈದಾಪುರದ ನಾಗರಿಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕು. ಈ ಹಿಂದೆ 2006ರಲ್ಲಿ ಸುನಾಮಿ ಸಂಭವಿಸಿದಾಗಲೂ ನಮ್ಮ ಶಾಲೆಯಿಂದ ಪರಿಹಾರ ನಿಧಿ ಸಂಗ್ರಹಿಸಲಾಗಿತ್ತು. ಆಗಲೂ ಇಲ್ಲಿಯ ನಾಗರಿಕರು ಉದಾರ ದೇಣಿಗೆ ನೀಡಿದ್ದರು ಎಂದರು.
ಗ್ರಾಮದ ವಿವಿಧ ಬಡಾವಣೆಗಳಿಗೆ ಮೆರವಣಿಗೆ ಮೂಲಕ ತೆರಳಿದ ವಿದ್ಯಾರ್ಥಿಗಳು, ಜನರಿಂದ ಪರಿಹಾರ ನಿಧಿ ಸಂಗ್ರಹಿಸಿದರು. ಮಕ್ಕಳ ಕಾರ್ಯವನ್ನು ಶ್ಲಾಘಿಸಿದ ನಾಗರಿಕರು, ಉದಾರವಾಗಿ ದೇಣಿಗೆ ನೀಡಿದರು. ಶಾಲೆಯ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.