ಯಾದಗಿರಿ: ‘ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಸಚಿವ ಸಂಪುಟದಿಂದ ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
‘ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಭಾಷೆ, ಧರ್ಮ, ಜಾತಿ, ಸಂಸ್ಕೃತಿ ಹೊಂದಿರುವ ಭಾರತದ ಆಡಳಿತಕ್ಕೆ ಸಂವಿಧಾನ ಆಧಾರಸ್ತಂಭ. ಇಂತಹ ವಿಶ್ವಖ್ಯಾತಿ ಮತ್ತು ಮಾದರಿ ಸಂವಿಧಾನದ ತಿದ್ದುಪಡಿ ಕುರಿತಂತೆ ಸಚಿವ ಅನಂತಕುಮಾರ್ ತುಚ್ಛವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಇದೇ ರೀತಿ ಅನಂತಕುಮಾರ್ ಮಾತುಗಳು ಮುಂದುವರಿದರೆ ಅವರನ್ನು ರಾಜ್ಯದಿಂದಲೇ ಗಡೀಪಾಡ ಮಾಡವಂತೆ ಒತ್ತಾಯಿಸಲಾಗುವುದು’ ಪ್ರತಿಭಟನಾಕಾರರು ಎಚ್ಚರಿಸಿದರು.
‘ಸಂವಿಧಾನ ಕರಡು ರಚನೆ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ತುಂಬಾ ಶ್ರಮವಹಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಒದಗಿಸಬೇಕಾದ ಸಂವಿಧಾನದ ಕನಸು ಹೊತ್ತು ದೇಶ, ಪ್ರಾಂತ, ಸಮುದಾಯ, ವಿಚಾರವಾದಿಗಳೊಂದಿಗೆ ಚರ್ಚೆ ನಡೆಸಿ ಸಂವಿಧಾನ ರಚಿಸಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಇಡೀ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಇಂಥಾ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಅನಂತಕುಮಾರ್ ಈಗ ಸಂವಿಧಾನದ ವಿರುದ್ಧ ನಾಲಿಗೆ ಹರಿಯಬಿಡುತ್ತಿರುವುದು ಸಮಂಜಸವಲ್ಲ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಗೋಪಾಲ ತೆಳಗೇರಿ, ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿನಾಥ ಸುಂಗಲಕರ್, ನಗರಸಭೆ ಸದಸ್ಯರಾದ ಮರೆಪ್ಪ ಚಟ್ಟರಕರ್, ಶಿವು ಕುರಕುಂಬಳ, ಶಿವುಕುಮಾರ ಗೆರೆಪ್ಪನೋರ್, ಚಂದ್ರಶೇಖರ ಬೀರನಾಳ, ಸಂಪತ್ತಕುಮಾರ ಚಿನ್ನಾಕಾರ್, ಭೀಮಾಶಂಕರ ಕಲಬುರ್ಗಿ, ಗಿರೀಶ ಚಟ್ಟರಕರ್, ವಸಂತ ಸುಂಗಲಕರ್, ಲಿಂಗರಾಜ ತೆಳಗೇರಿ, ಅನೀಲ್ ಕುಮಾರ ಅನವಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.