ಶಹಾಬಾದ: ‘ತ್ರಿಕಾಲ ಜ್ಞಾನಿಯಾಗಿ ವಾಸ್ತವ ಅರಿತು, ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ ಇಂದಿಗೂ ಅಜರಾಮರ’ ಎಂದು ಭಂಕೂರ ಶಾಂತನಗರದ ಬಸವ ಸಮಿತಿಯ ಅಧ್ಯಕ್ಷ ಅಮೃತ ಮಾನಕರ್ ಹೇಳಿದರು.
ತಾಲ್ಲೂಕಿನ ಭಂಕೂರ ಗ್ರಾಮದ ಕೋರಿಸಿದ್ಧೇಶ್ವರ ಟ್ಯೂಶನ್ ಸೆಂಟರ್ನಲ್ಲಿ ಈಚೆಗೆ ನಡೆದ ಸರ್ವಜ್ಞ ಜಯಂತಿ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾಡಿನೆಲ್ಲಡೆ ಸಂಚರಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಂಡ ಸತ್ಯವನ್ನು ಹೇಳುವ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದ್ಯೆ, ಜಾತಿ, ಕೃಷಿ, ಮಾತು, ದುಶ್ಚಟಗಳ ಕುರಿತು ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ವಚನಗಳು ನಮಗೆ ಜ್ಞಾನದ ದಾರಿ ದೀಪವಿದ್ದಂತೆ. ವಚನಗಳನ್ನು ಪಚನ ಮಾಡಿಕೊಂಡರೆ ಸುಂದರ ಸಮಾಜ ಸೃಷ್ಟಿಸಲು ಸಾಧ್ಯ’ ಎಂದು ಹೇಳಿದರು.
ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ ಮಾತನಾಡಿ, ‘ವಿದ್ಯಾರ್ಥಿಗಳು ಶಿಸ್ತು ಸಂಯಮ, ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಕಾಲಹರಣ ಮಾಡುವ ಅವಧಿ ಅಲ್ಲ. ಮಹತ್ತರ ಜವಾಬ್ದಾರಿ ನಿರ್ವಹಿಸುವ ಕಾಲ. ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಸಮಯ. ವಿದ್ಯಾರ್ಥಿಗಳು ಹೊಣೆಗಾರಿಕೆಯಿಂದ ವಿದ್ಯೆ ಕಲಿತು ಸಮಾಜಕ್ಕೆ ಉಪಯುಕ್ತವಾಗಿ ಬೆಳೆಯಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.