ಯಾದಗಿರಿ: ಜಿಲ್ಲೆಯ ಗಡಿ ಅಂಚಿನಲ್ಲಿರುವ ನೆರಡಗಂ ಗ್ರಾಮದ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದಲ್ಲಿ ಭಾನುವಾರ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ರಥೋತ್ಸವ ಜರುಗಿತು.
ಪ್ರತಿವರ್ಷ ಮೂರು ದಿನಗಳ ಕಾಲ ನಡೆಯುವ ಸಿದ್ದಲಿಂಗೇಶ್ವರ ಜಾತ್ರೆಯ ಮೊದಲ ದಿನಶನಿವಾರ ಬೆಳಗಿನ ಜಾವ ಮಠದಲ್ಲಿ ಧ್ವಜಾರೋಹಣ, ಪ್ರಭೋತ್ಸವ, ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು. ನಂತರ ಸಾಯಂಕಾಲ ಸಿದ್ದಲಿಂಗೇಶ್ವರರ ಕರ್ತೃ ಗದ್ದುಗೆಯಲ್ಲಿದ್ದ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿದರು.
ನಂತರ ರಥಕ್ಕೆ ಪೂಜೆ ಸಲ್ಲಿಸಿ ಸಿದ್ದಲಿಂಗೇಶ್ವರರ ಮೂರ್ತಿಯನ್ನು ರಥದಲ್ಲಿ ಇಟ್ಟು ಅದ್ಧೂರಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದುದ್ದಕ್ಕೂ ಮಹಿಳೆಯರು ಆರತಿ ಹೊತ್ತು ಭಕ್ತಿಗೀತೆ ಹಾಡಿದರೆ, ಪುರಷರು ಸಿದ್ದಲಿಂಗೇಶ್ವರ ಮಹಾರಾಜ ಕೀ ಜೈ ಎಂಬ ಘೋಷಣೆ ಮೊಳಗಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.
ಜಾತ್ರೆಯಲ್ಲಿ ಪುರವಂತರ ಸೇವೆ ನಡೆಯಿತು. ರಥೋತ್ಸವ ನಂತರ ಶ್ರೀಮಠದ ಪೀಠಾಧ್ಯಕ್ಷ ಪಂಚಮಿ ಸಿದ್ದಲಿಂಗ ಸ್ವಾಮೀಜಿ ತುಲಾಭಾರ ಕಾರ್ಯಕ್ರಮ ಹಾಗೂ ಧರ್ಮ ಸಭೆ ಜರುಗಿತು. ಜಾತ್ರೆಯ ಕಡೆ ದಿನವಾದ ಸೋಮವಾರ ನಾಮಕರಣ ಹಾಗೂ ಪಲ್ಲಕ್ಕಿ ಸೇವೆಯೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಗುರುಮಠಕಲ್ನ ಖಾಸಾಮಠದ ಪೀಠಾಧ್ಯಕ್ಷ ಗುರು ಮುರುಘರಾಜೇಂದ್ರ ಶ್ರೀ, ಒಳಬಳ್ಳಾರಿಯ ಸಿದ್ದಲಿಂಗ ಸ್ವಾಮೀಜಿ, ಶಾಂತಮಲ್ಲ ಸ್ವಾಮೀಜಿ, ಶಂಬುಲಿಂಗ ಸ್ವಾಮಿ ಕಲ್ಲೂರ, ಚಂದ್ರಶೇಖರ ದೇವರು ಗದಗ, ಆದಿತ್ಯಪರ ಸ್ವಾಮೀಜಿ, ಕ್ಷೀರಾಲಿಂಗಸ್ವಾಮಿ ಚೇಗುಂಟಾ, ಸದಾಶಿವ ದೇವರು ಒಳಬಳ್ಳಾರಿ ಇದ್ದರು.
*ಮಠಗಳು ಕೇವಲ ಆಧ್ಯಾತ್ಮಿಕ ಕೇಂದ್ರಗಳಾಗಿ ಸೀಮಿತವಾಗುವುದು ನಮಗೆ ಇಷ್ಟವಿಲ್ಲ. ಹಾಗಾಗಿಯೇ, ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.
–ಪಂಚಮ ಸಿದ್ದಲಿಂಗ ಸ್ವಾಮೀಜಿ,ಪೀಠಾಧ್ಯಕ್ಷ, ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.