ADVERTISEMENT

ಸುರಪುರ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:30 IST
Last Updated 4 ಅಕ್ಟೋಬರ್ 2011, 8:30 IST

ಸುರಪುರ: ಐದು ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ವಾರ್ಷಿಕ ಮುಂಬಡ್ತಿ ನೀಡಬೇಕೆಂಬುದೂ ಸೇರಿದಂತೆ ಇತರ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ (ಸಿ.ಐ.ಟಿ.ಯು.) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಗಾಂಧಿವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ತೆರಳಿ ಬಾಲ ವಿಕಾಸ ಯೋಜನಾಧಿಕಾರಿ ಟಿ. ಪಿ. ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಸಿ.ಐ.ಟಿ.ಯು. ಅಧ್ಯಕ್ಷೆ ಸುರೇಖಾ ಕುಲಕರ್ಣಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ನಮ್ಮನ್ನು ಕೆಳ ದರ್ಜೆ ನೌಕರರಂತೆ ಕಾಣುತ್ತಿದೆ. ಎಷ್ಟೊ ಬಾರಿ ಮಾಡಿದ ಮನವಿಗಳು ನಿಷ್ಫಲವಾಗಿವೆ ಎಂದು ದೂರಿದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್, ಭಾರತ ವಿದ್ಯಾರ್ಥಿ ಫೆಡರೇಶನ್‌ದ ಜಿಲ್ಲಾ ಸಂಚಾಲಕ ಪ್ರಕಾಶ ಆಲ್ಹಾಳ, ತಾಲ್ಲೂಕು ಅಧ್ಯಕ್ಷ ರಾಮಯ್ಯ ಬೋವಿ ಪ್ರತಿಭಟನೆಗೆ ಬೆಂಬಲಿಸಿ ಭಾಗವಹಿಸಿದ್ದರು.

2010ರ ಕಟ್ಟಿಗೆ ಹಣ ಬಿಡುಗಡೆ ಮಾಡಬೇಕು. ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸಬೇಕು. ಗೌರವ ಧನ ಶೀಘ್ರದಲ್ಲಿ ವಿಲೇವಾರಿಯಾಗಬೇಕು. ಸ್ತ್ರೀ ಶಕ್ತಿ ಮತ್ತು ಭಾಗ್ಯಲಕ್ಷ್ಮಿ ಕಾರ್ಯಕರ್ತೆಯರ ಪ್ರೋತ್ಸಾಹ ಧನ ನೀಡಬೇಕು. ನಿವೃತ್ತಿ ಹೊಂದಿದ ಕಾರ್ಯಕರ್ತೆಯರ ನಿವೃತ್ತ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳು ಮನವಿ ಪತ್ರದಲ್ಲಿವೆ.

ಸಿ.ಐ.ಟಿ.ಯು ಕಾರ್ಯದರ್ಶಿ ಬಸಮ್ಮ ಆಲ್ಹಾಳ, ಖಜಾಂಚಿ ನಸೀಮಾ ಮುದ್ನೂರ್ ಮತ್ತು ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.