ADVERTISEMENT

ಸುರಪುರ ಬಂದ್ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 5:30 IST
Last Updated 6 ಜನವರಿ 2012, 5:30 IST

ಸುರಪುರ: ಸಿಂದಗಿ ಪಟ್ಟಣದಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣವನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಗುರುವಾರ ಕರೆ ನೀಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವೇದಿಕೆಯ ಕಾರ್ಯಕರ್ತರು ದುಷ್ಕರ್ಮಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಗಾಂಧಿವೃತ್ತದಲ್ಲಿ ಸಮಾವೇಶಗೊಂಡು ಬಹಿರಂಗ ಸಭೆ ನಡೆಸಿದರು.

ನೇತೃತ್ವ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ವೀರೇಶರೆಡ್ಡಿ ಕೋನ್ಹಾಳ ಮಾತನಾಡಿ, ನಮ್ಮ ದೇಶದಲ್ಲಿದ್ದುಕೊಂಡು, ನಮ್ಮ ಅನ್ನವನ್ನು ತಿಂದು ದೇಶದ್ರೋಹದ ಕೆಲಸ ಮಾಡುವ ದುಷ್ಕರ್ಮಿಗಳಿಗೆ ಗಡೀಪಾರು ಮಾಡಬೇಕು. ಹಿಂದು ಸಂಘಟನೆಯೊಂದರ ಯುವಕರೆ ಈ ಕೃತ್ಯ ಎಸಗಿರುವುದು ದುರದೃಷ್ಟಕರ. ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಾಧ್ಯಕ್ಷ ತಿಪ್ಪುನಾಯಕ್ ಡೊಣ್ಣಿಗೇರಿ, ಉಪಾಧ್ಯಕ್ಷ ರಾಘವೇಂದ್ರ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಹಳಿಸಗರ ಮಾತನಾಡಿ, ನಮ್ಮ ಗುಪ್ತಚರ ಇಲಾಖೆಯನ್ನು ಬಲಪಡಿಸಬೇಕು. ಇಂತಹ ಕೃತ್ಯಗಳು ಮರುಕಳಿಸದ ಹಾಗೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ರಾಧೆಶಾಮ ಗುಡಗುಂಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲಿಸಿದ್ದವು.

ನರಸಿಂಗ ರಾಠೋಡ, ವಾಸು ಡೊಣ್ಣಿಗೇರಿ, ಮಾನಶಪ್ಪ ಹೊಸಮನಿ, ಭೀಮು ಡೊಣ್ಣಿಗೇರಿ, ರಾಜು ಝಂಡಾದಕೇರಿ, ವೆಂಕಟೇಶ ಡೊಣ್ಣಿಗೇರಿ, ನಾಗರಾಜ ಡೊಣ್ಣಿಗೇರಿ, ಆಸಿಫ್, ಗೌಡಪ್ಪ, ದೇವು, ದತ್ತು, ಮೌನೇಶನಾಯಕ್, ಸುರೇಶ ಬಳಿಚಕ್ರ, ಸುಗೂ ರಂಗಂಪೇಟ, ಲಕ್ಷ್ಮೀಕಾಂತ ದೇವರಗೋನಾಲ, ವೀರಭದ್ರ, ಶರಣು ಎವೂರ, ಮುತ್ತು ರಂಗಂಪೇಟ, ತಿಪ್ಪು ಬಿಚ್ಚಗತ್ತಗೇರಿ, ಮೌನೇಶ ಅಳ್ಳಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.