ಕಕ್ಕೇರಾ: ಕೃಷ್ಣಾನದಿಗೆ ನೀರು ಹರಿದು ಬಂದ ಪರಿಣಾಮ ಕೃಷ್ಣಾನದಿ ತೀರದ ನೀಲಕಂಠರಾಯನ ಗಡ್ಡಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕಾಮಗಾರಿಗೆ ಸಂಬಂಧಿಸಿದ ಸಾಮಾಗ್ರಿಗಳು ನೀರಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ನಡೆದಿದೆ.
ರಾಯಚೂರು ವಿದ್ಯುತ್ ಘಟಕಕ್ಕೆ ನೀರಿನ ಬೇಡಿಕೆ ಸಲ್ಲಿಸಲಾಗಿತ್ತು. ಹೀಗಾಗಿ ಬಸವಸಾಗರ ಜಲಾಶಯದಿಂದ ಗುರುವಾರ ಸಂಜೆಯಿಂದ 1 ಟಿಎಂಸಿ ನೀರನ್ನು ಹಂತ ಹಂತವಾಗಿ ನದಿಗೆ ಹರಿಬಿಡಲಾಗಿತ್ತು.
ಸೇತುವೆ ನಿರ್ಮಾಣ ಕಾಮಗಾರಿಗಾಗಿ ನದಿ ಬಳಿ ಸಂಗ್ರಹಿಸಿಡಲಾಗಿದ್ದ ಕಬ್ಬಿಣ ರಾಡು, 200 ಪ್ಲೇಟ್ ಹಾಗೂ 100 ಟ್ರಿಪ್ ಮರಳು ಸೇರಿದಂತೆ ಇತರೆ ಸಾಮಾಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ₹ 10 ಲಕ್ಷ ನಷ್ಟವಾಗಿದೆ ಎಂದು ಗುತ್ತಿಗೆದಾರ ಶಂಕರ ಚವ್ಹಾಣ ಆತಂಕ ತೋಡಿಕೊಂಡಿದ್ದಾರೆ.ಜನವರಿಯಲ್ಲಿ ಸೇತುವೆಯ ಸ್ತಂಭಗಳ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಜಲಾಶಯದಿಂದ ನದಿಗೆ ನೀರು ಹರಿದು ಬಂದಿದ್ದರಿಂದ ಕಾಮಗಾರಿಗೆ ಅಡ್ಡಿಯುಂಟಾಗಿ, ಭಾರಿ ನಷ್ಟವಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಭೇಟಿ ನೀಡದ ಅಧಿಕಾರಿಗಳು: ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ ಸಂಬಂಧಿಸಿದ ಯಾವ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.