ಯಾದಗಿರಿ: ಸ್ತ್ರೀಯರಲ್ಲಿರುವ ಅನೇಕ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಅತ್ಯುತ್ತಮವಾದ ಚಿಕಿತ್ಸೆ ಲಭ್ಯವಿದೆ. ಈ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸಲು ಆಯುಷ್ ಇಲಾಖೆಯು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಆಯುಷ್ ವೈದ್ಯೆ ಡಾ. ಸುನಂದಾ ಕುದರಿ ಹೇಳಿದರು.
ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆಗಳ ಆಶ್ರಯದಲ್ಲಿ ಬಿಆರ್ಜಿಎಫ್ ಅನುದಾನದಡಿಯಲ್ಲಿ ಹಮ್ಮಿಕೊಂಡಿದ್ದ ಸ್ತ್ರೀರೋಗಕ್ಕಾಗಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಆಯುಷ್ ವೈದ್ಯ ಪದ್ಧತಿಯಿಂದ ದುಷ್ಪರಿಣಾಮಗಳು ಇಲ್ಲದೇ ಇರುವುದರಿಂದ ಜನರು ಅಧಿಕವಾಗಿ ಆಯುರ್ವೇದ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದ ಅವರು, ಈಗಾಗಲೇ ನಮ್ಮ ಚಿಕಿತ್ಸಾಲಯದಿಂದ ಅನೇಕ ಆಯುಷ್ ಅರಿವು, ಮನೆಮದ್ದು ಕಾರ್ಯಕ್ರಮಗಳನ್ನು ಸುತ್ತಲಿನ ಗ್ರಾಮಗಳಲ್ಲಿ ಏರ್ಪಡಿಸಲಾಗಿದೆ. ಮನೆಗಳಲ್ಲಿಯೇ ಸಣ್ಣಪುಟ್ಟ ಕಾಯಿಲೆಗಳಿಗೆ ಮದ್ದು ತಯಾರಿಸುವ ವಿಧಾನವನ್ನು ಜನರಿಗೆ ತಿಳಿಸಿ ಕೊಡಲಾಗಿದೆ ಎಂದರು.
ಪ್ರಭಾರ ಆಯುಷ್ ವೈದ್ಯಾಧಿಕಾರಿ ಡಾ. ಪ್ರಕಾಶ ರಾಜಾಪುರ ಮಾತನಾಡಿ, ಸಾರ್ವಜನಿಕರಿಗೆ ಒಳ್ಳೆಯ ಆರೋಗ್ಯ ದೊರೆಯಲಿ ಎಂಬ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಜನರು ಇದರ ಉಪಯೋಗ ಪಡೆಯಬೇಕು ಎಂದು ತಿಳಿಸಿದರು.
ಹತ್ತಿಕುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಕಾಂತ ತಮ್ಮಣ್ಣನೋರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚೆನ್ನಬಸಮ್ಮ ಸೋಮಣ್ಣೋರ್ ಉದ್ಘಾಟಿಸಿದರು. ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶರಣಮ್ಮ ಕವಾಲ್ದಾರ, ಆಯುಷ್ ನೋಡಲ್ ಅಧಿಕಾರಿ ಡಾ. ರಮೇಶ ಸಜ್ಜನ, ಡಾ. ಬಸವರಾಜ ತಳವಾಳ ಆಗಮಿಸಿದ್ದರು.
ಊರಿನ ಪ್ರಮುಖರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಡಾ. ರಾಜೇಶ್ವರಿ ವಂದಿಸಿದರು, ಮಲ್ಲಿಕಾರ್ಜುನ ನಿರೂಪಿಸಿದರು, ವೈದ್ಯರಾದ ಡಾ. ಗಂಗಾಧರ ಸರಾಫ, ಡಾ. ರಾಜೇಶ್ವರಿ, ಡಾ. ಸುನಂದಾ ಕುದರಿ, ಡಾ. ರಮೇಶ ಸಜ್ಜನ, ಡಾ. ಬಸವರಾಜ ಅವರನ್ನು ಒಳಗೊಂಡ ತಂಡ ಸುಮಾರು 200 ಕ್ಕೂ ಅಧಿಕ ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ಮತ್ತು ಔಷಧಿ ವಿತರಿಸಿದರು. ಹತ್ತಿಕುಣಿ ಮತ್ತು ಸುತ್ತಲಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.