ಸುರಪುರ: ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ದಾಖಲೆ ಮಳೆ ಸುರಿದಿದೆ. ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೆ ನಿರಂತರವಾಗಿ ಬಂದ ಮಳೆ ಜನರನ್ನು ಹೈರಾಣಾಗಿಸಿದೆ. ತಾಲ್ಲೂಕಿನಲ್ಲಿ 33 ಮನೆಗಳು ಸಂಪೂರ್ಣ ಕುಸಿದಿವೆ. 136 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನಗರದ ಐತಿಹಾಸಿಕ ದರಬಾರ ಶಾಲೆಯ ಮುಖ್ಯದ್ವಾರದ ಮೇಲುಗೋಡೆ ಕುಸಿಯುವ ಹಂತದಲ್ಲಿದೆ.
ಸಾವಿರಾರು ಹೆಕ್ಟೇರ್ ತೊಗರಿ, ಹತ್ತಿ ಇತರ ಬೆಳೆಗಳು ಜಲಾವೃತಗೊಂಡಿವೆ. ಶುಕ್ರವಾರ ಸುರಪುರ ವಲಯದಲ್ಲಿ 117.2 ಮಿ.ಮೀ, ಕಕ್ಕೇರಾ ವಲಯದಲ್ಲಿ 52 ಮಿ.ಮೀ, ಕೆಂಭಾವಿ ವಲಯದಲ್ಲಿ 48.6 ಮಿ.ಮೀ ಮಳೆ ಬಿದ್ದಿದೆ. ವಣಿಕ್ಯಾಳ ಗ್ರಾಮದ ಸುಡುಗಾಡು ಸಿದ್ದರ ಕಾಲೊನಿಯ ಮನೆಗಳಿಗೆ ನೀರು ನುಗ್ಗಿದೆ. ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತವಾಗಿದೆ. ದೇವಿಕೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯೂ ನೀರಲ್ಲಿ ನಿಂತಿದೆ.
ಬಹುತೇಕ ಗ್ರಾಮಗಳ ಚಿಕ್ಕ ಚಿಕ್ಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ರಭಸಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೊಚ್ಚಿಹೋಗಿವೆ. ಸುರಪುರ ವನದುರ್ಗ ಮಾರ್ಗ ಮಧ್ಯೆ ಬರುವ ಭಾವನಹಳ್ಳ ತುಂಬಿ ಹರಿಯುತ್ತಿದ್ದು ಸಂಪರ್ಕ ತಪ್ಪಿಸಿದೆ. ಭೈರಿಮಡ್ಡಿ ಗ್ರಾಮದ ಹತ್ತಿರ ಸೇತುವೆ ಭಾಗಶಃ ಕೊಚ್ಚಿ ಹೋಗಿದೆ. ಹೆಚ್ಚಿನ ಹಾನಿ ಸಂಭವಿಸಿದ ಗ್ರಾಮಗಳಿಗೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಭೇಟಿ ನೀಡಿ
ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.