ADVERTISEMENT

ನೀಲಕಂಠರಾಯನಗಡ್ಡಿ ಸೇತುವೆ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:03 IST
Last Updated 10 ಜನವರಿ 2018, 6:03 IST

ಕಕ್ಕೇರಾ: ಪಟ್ಟಣದಲ್ಲಿ ಭಾನುವಾರ ₹18 ಕೋಟಿ ವೆಚ್ಚದ ವಿವಿಧ ರಸ್ತೆಗಳ ಡಾಂಬರೀಕರಣ, ಮುಖ್ಯವಾಗಿ ನೀಲಕಂಠರಾಯನ (ನಡು)ಗಡ್ಡಿ ಸೇತುವೆ ಹಾಗೂ ಪಿಯು ಕಾಲೇಜು ತರಗತಿ ಕೋಣೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ಜೊತೆಗೆ ಕನಕ ಭವನ, ಶಾದಿಮಹಲ್ ಭವನ ಉದ್ಘಾಟಿಸಿದರು.

‘ನೀಲಕಂಠರಾಯನ (ನಡು) ಗಡ್ಡಿ ಜನ ಮಳೆಗಾಲದಲ್ಲಿ ಪ್ರವಾಹ ಬಂದಾಗ ಹೊರಜಗತ್ತಿನ ಸಂಪರ್ಕ ಕಡಿತಗೊಂಡು 2-3 ತಿಂಗಳು ಅತೀವ ತೊಂದರೆಪಡುತ್ತಾರೆ. ಕೊಟ್ಟ ಮಾತಿನಂತೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ ಪ್ರಾದೇಶಿಕ ಆಯುಕ್ತರಿಂದ ಅನುದಾನ ಪಡೆದು ₹1.62 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. 3 ತಿಂಗಳೊಳಗೆ ಈ ಸೇತುವೆ ಕಾಮಗಾರಿ ಮುಗಿಯಲಿದ್ದು, ಗಡ್ಡಿ ಜನರ ಸುಗಮ ಓಡಾಟಕ್ಕೆ ಅನುಕೂಲವಾಗಲಿದೆ. ಸೇತುವೆ ನಿರ್ಮಾಣಕ್ಕೆ ಹಣ ಕಡಿಮೆ ಬಿದ್ದಲ್ಲಿ ₹10 ಲಕ್ಷ ವೈಯಕ್ತಿಕವಾಗಿ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಬೃಹತ್ ಸೇತುವೆ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

‘ನಾನು ಮತಕ್ಕಾಗಿ ರಾಜಕಾರಣ ಮಾಡಿದವನಲ್ಲ. ಕ್ಷೇತ್ರದ ಮತದಾರರ ಋಣ ತೀರಿಸಲು ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು, ಸಾರಿಗೆ, ವಿದ್ಯುತ್, ಆರೋಗ್ಯ, ಶಿಕ್ಷಣ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ವಿರೋಧ ಪಕ್ಷಗಳ ಮುಖಂಡರ ಮಾತಿಗೆ ಓಗೊಡದೆ ಮತ್ತೊಮ್ಮೆ ನನ್ನನ್ನು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೂ ಮೊದಲು ಕಕ್ಕೇರಾ-ಬಂದೊಡ್ಡಿ ರಸ್ತೆ ಡಾಂಬರೀಕರಣ, ಕಕ್ಕೇರಾ-ಹುಣಸಗಿ, ತಿಂಥಣಿ-ಬಲಶೆಟ್ಟಿಹಾಳ, ಹೊಸೂರ-ಬಂಡೊಳ್ಳಿ, ಗೆದ್ದಲಮರಿ-ಗೆದ್ದಲಮರಿ ತಾಂಡಾವರೆಗೆ ಒಳಗೊಂಡಂತೆ ಕಾಮನಟಗಿ, ಕುಪ್ಪಿ, ಬಂದೊಡ್ಡಿ ಗ್ರಾಮಗಳ ₹16 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಹಾಗೂ ₹43 ಲಕ್ಷ ವೆಚ್ಚದ ಪಿಯು ಕಾಲೇಜು ತರಗತಿ ಕೋಣೆಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಪುರಸಭೆ ಸದಸ್ಯರು, ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.