ADVERTISEMENT

ಪಿಡಿಒಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಜಿ.ಪಂ ಸಿಇಒ!

13 ಗ್ರಾಮ ಪಂಚಾಯಿತಿಗಳಲ್ಲಿ ನಡೆಯದ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 13:29 IST
Last Updated 11 ಫೆಬ್ರುವರಿ 2018, 13:29 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಕೊಠಡಿಯಲ್ಲಿ ಗ್ರಾಮ ಸಭೆ ನಡೆಸದ ಪಿಡಿಒಗಳನ್ನು ಶನಿವಾರ ಕೂಡಿ ಹಾಕಲಾಗಿತ್ತು
ಯಾದಗಿರಿ ಜಿಲ್ಲಾ ಪಂಚಾಯಿತಿ ಕೊಠಡಿಯಲ್ಲಿ ಗ್ರಾಮ ಸಭೆ ನಡೆಸದ ಪಿಡಿಒಗಳನ್ನು ಶನಿವಾರ ಕೂಡಿ ಹಾಕಲಾಗಿತ್ತು   

ಯಾದಗಿರಿ: ಸುರಪುರ ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಗ್ರಾಮಸಭೆ ನಡೆಸಿ, ವರದಿ ಸಲ್ಲಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನಾಶ್ ರಾಜೇಂದ್ರನ್ ಮೆನನ್ ಅವರು ಶನಿವಾರ ಜಿಲ್ಲಾ ಪಂಚಾಯಿತಿ ಕೊಠಡಿಯಲ್ಲಿ ಕೂಡಿ ಹಾಕಿದ್ದರು.

ವಿವಿಧ ಯೋಜನೆಗಳಲ್ಲಿ ವಸತಿ ರಹಿತರಿಗೆ ಸರ್ಕಾರ ಮಂಜೂರು ಮಾಡಿರುವ ಮನೆಗಳ ಹಂಚಿಕೆ ಮಾಡುವಂತೆ ಸಿಇಒ ಅವರು ಪಿಡಿಒಗಳಿಗೆ ಸೂಚಿಸಿದ್ದರು.

‘ಎರಡು ವರ್ಷ ಕಳೆದರೂ ಪಿಡಿಒಗಳು ಗ್ರಾಮಸಭೆ ನಡೆಸಿ ಮನೆ ಹಂಚಿಕೆ ಮಾಡಿರಲಿಲ್ಲ. ಈ ಮಧ್ಯೆ ಜಿಲ್ಲಾ ಪಂಚಾಯಿತಿಯಿಂದ ಎಂಟು ಮಂದಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಗ್ರಾಮಸಭೆ ನಡೆಸುವಂತೆ ಸೂಚಿಸಿದ್ದರೂ, 13 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಗ್ರಾಮ ಸಭೆ ನಡೆಸಿಲ್ಲ. 2016 ಮತ್ತು 17ನೇ ಸಾಲಿನ ಒಟ್ಟು 2 ಸಾವಿರ ಮನೆಗಳು ಹಂಚಿಕೆಯಾಗದೇ ಉಳಿದಿವೆ’ ಎಂದು ಸಿಇಒ ಅವಿನಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪಿಡಿಒಗಳಿಗೆ 4–5 ಗ್ರಾಮ ಪಂಚಾಯಿತಿ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿದೆ. ಈ ಒತ್ತಡದಲ್ಲಿ ಗ್ರಾಮಸಭೆ ನಡೆಸುವುದು ವಿಳಂಬವಾಗಿದೆ. ಕರ್ತವ್ಯ ಲೋಪವಾಗಿದ್ದರೆ ಹಿರಿಯ ಅಧಿಕಾರಿಗಳು ಷೋಕಾಸ್ ನೋಟಿಸ್ ನೀಡಬೇಕು ಇಲ್ಲವೇ ಅಮಾನತು ಮಾಡಬೇಕು. ಅದನ್ನು ಬಿಟ್ಟು ಇಡೀ ದಿನ ಅನ್ನ, ನೀರು ಇಲ್ಲದಂತೆ ಕೊಠಡಿಯಲ್ಲಿ ಕೂಡಿ ಹಾಕಿರುವುದು ಯಾವ ನ್ಯಾಯ’ ಎಂದು ಸಾಮಾಜಿಕ ಕಾರ್ಯಕರ್ತ ಯಂಕೋಬ ಪ್ರಶ್ನಿಸಿದ್ದಾರೆ.

ಬೆಳಿಗ್ಗೆ 10ರಿಂದ ರಾತ್ರಿ 11ರವರೆಗೂ ಪಿಡಿಒಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದು, ಪಿಡಿಒಗಳು ಹಸಿವಿನಿಂದ ಬಳಲಿ ಕುಳಿತಿದ್ದರು. ‘ಅಧಿಕಾರಿಗಳು ಸಭೆ ನಡೆಸಿಲ್ಲ ಎಂದು ಬರೆದು ಕೊಡುವವರೆಗೂ ನಾನೂ ಇಲ್ಲಿಂದ ಹೋಗುವುದಿಲ್ಲ’ ಎಂದು ಅವಿನಾಶ್‌ ಅವರು ರಾತ್ರಿ ಕಚೇರಿಯಲ್ಲೇ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.