ಸುರಪುರ: 146 ಸಂಸದರ ಅಮಾನತು ಮಾಡಿದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಶುಕ್ರವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಗುತ್ತೇದಾರ ಮಾತನಾಡಿ, ‘ಕೇಂದ್ರ ಸರ್ಕಾರ ಸರ್ವಾಧಿಕಾರಿಯ ಧೋರಣೆ ಮಾಡುತ್ತಿದೆ. ಸಂಸತ್ನಲ್ಲಿ 146 ಸದಸ್ಯರನ್ನು ಅಮಾನತು ಮಾಡಿ ಸದನದಿಂದ ಹೊರ ಕಳುಹಿಸಿರುವುದೇ ಇದಕ್ಕೆ ನಿದರ್ಶನವಾಗಿದೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಿ, ಆತಂಕ ಉಂಟು ಮಾಡುತ್ತಿದೆ’ ಎಂದು ಆರೋಪಿಸಿದರು.
‘ವಿನಾಕಾರಣ ತನ್ನ ಅಧೀನದಲ್ಲಿ ಬರುವ ಇ.ಡಿ, ಸಿಬಿಐ ಇನ್ನಿತರ ಏಜೆನ್ಸಿಗಳ ಮೂಲಕ ಕಿರುಕುಳ ನೀಡುತ್ತಿದೆ. ದೆಹಲಿ ಸದನದಲ್ಲಿ ಪಾಸಾದ ಬಿಲ್ಗಳನ್ನು ತಿರಸ್ಕರಿಸುವ ಮೂಲಕ ಹಾಗೂ ಅವರ ಹಿಡಿತದಲ್ಲಿರುವ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಚುನಾಯಿತ ಸರ್ಕಾರವನ್ನು ಆಪತ್ತಿಗೆ ಸಿಲುಕಿಸಿ ತೊಂದರೆ ಕೊಡುತ್ತಿದೆ’ ಎಂದು ದೂರಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿ ‘ಸ್ಮೋಕ್ ಬಾಂಬ್ ದುಷ್ಕರ್ಮಿಗಳಿಗೆ ಪಾಸ್ ನೀಡಿದ ಬಿಜೆಪಿ ಸಂಸತ್ ಸದಸ್ಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಈ ಘಟನೆಯ ಸಮಗ್ರ ತನಿಖೆಯನ್ನು ಸಿಬಿಐ, ರಾ ಸಂಸ್ಥೆಗಳಿಗೆ ವಹಿಸಬೇಕು’ ಎಂದು ಒತ್ತಾಯಿಸಿದರು.
ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಲಾಯಿತು. ಜಿಲ್ಲಾ ಮಾಧ್ಯಮ ಉಸ್ತುವಾರಿ ಸುಭಾಷ ತೇಲ್ಕರ್, ಪರಶುರಾಮ ಪೂಜಾರಿ, ಶರಣಪ್ಪ ದೊರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.