ಪ್ರಜಾವಾಣಿ ವಾರ್ತೆ
ಗುರುಮಠಕಲ್: ರಾಯಚೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ದಿನದಂದು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆರವು ಮಾಡಿಸಿ, ಧ್ವಜಾರೋಹಣ ಮಾಡಿರುವುದು ಖಂಡನೀಯ. ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೃಷ್ಣ ಚಪೆಟ್ಲಾ ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಸಂಗದ ವತಿಯಿಂದ ಕರೆ ನೀಡಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದರು.
‘ನ್ಯಾಯಾಂಗವು ಅತ್ಯಂತ ಪವಿತ್ರವಾದುದು. ಆದರೆ, ನ್ಯಾ.ಮಲ್ಲಿಕಾರ್ಜುನ ಗೌಡ ಅವರು ತಮ್ಮ ಸ್ಥಾನದ ಘನತೆಗೆ ಕುಂದು ತರುವ ವರ್ತನೆಯನ್ನು ಮಾಡಿದ್ದಾರೆ. ಅವರನ್ನು ವಜಾಗೊಳಿಸುವುದು ಮತ್ತು ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಗಂಗಾ ಪರಮೇಶ್ವರಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿದ ಕಾರ್ಯಕರ್ತರು, ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡರು. ನಂತರ ತಹಶೀಲ್ದಾರ್ ಶರಣಬವಸ ರಾಣಪ್ಪ ಅವರಿಗೆ ಮನವಿ ಪತ್ರ ನೀಡಲಾಯಿತು.
ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಉಪತಹಶೀಲ್ದಾರ್ ಇಜಾಜ್ ಹುಲ್ಹಕ್, ಮುಖಂಡರಾದ ಭೀಮಶಪ್ಪ ಗುಡಿಸೆ, ವೀರಪ್ಪ ಪ್ಯಾಟಿ, ಬಾಬು ತಲಾರಿ, ಭೀಮಶಪ್ಪ ಕೆ, ಮಾಣೀಕ್ ಮುಕುಡಿ, ಹಣಮಂತು, ಕೃಷ್ಣ ಮೇದಾ, ಅಶೋಕ, ಹುಸೇನಪ್ಪ ಪುಲಿ, ಲಾಲಪ್ಪ ತಲಾರಿ, ಮಹದೇವಪ್ಪ, ಬಾಬು ನಜಾರಪೂರ, ರಾಜು, ವೆಂಕಟಪ್ಪ ಸೇರಿದಂತೆ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.