ಗುರುಮಠಕಲ್: ‘ಪ್ರಸ್ತುತ ದಿನಗಳು ಯುದ್ಧ ಭೀತಿಯಿಂದ ಕೂಡಿವೆ. ಇತಿಹಾಸದಲ್ಲಿ ನಾವು ಯುದ್ಧಗಳನ್ನೂ ನೋಡಿದ್ದು, ಬುದ್ಧನನ್ನೂ ನೋಡಿರುವೆವು. ಬುದ್ಧ ಮತ್ತು ಗಾಂಧೀಜಿ ಬೋಧಿಸಿದ ಅಹಿಂಸಾ ಮಾರ್ಗವು ಇಂದು ಅತ್ಯವಶ್ಯಕವಾಗಿದೆ’ ಎಂದು ನಿವೃತ್ತ ಪ್ರಾಂಶುಪಾಲ ಸರ್ವೋದಯ ಶಿವಪುತ್ರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಐಕ್ಯೂಎಸಿ, ಸಾಂಸ್ಕೃತಿಕ ಸಮಿತಿ, ಕನ್ನಡ, ಇತಿಹಾಸ ಮತ್ತು ಸಮಾಜಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಜರುಗಿದ ‘ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ಯುದ್ಧೋನ್ಮಾದದ ವರ್ತಮಾನದಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗದ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು.
‘ಅಹಿಂಸೆ, ಕರುಣೆ, ಸೌಹಾರ್ದತೆಯನ್ನು ಬೋಧಿಸಿದ ಬುದ್ದ ಮತ್ತು ಗಾಂಧೀಜಿ ನಮಗೆ ಆದರ್ಶವಾಗಬೇಕು. ಯುದ್ಧವು ದುಂದುವೆಚ್ಚ, ಆರ್ಥಿಕತೆ ಕುಸಿತ ಮತ್ತು ಮನುಕುಲದ ನಾಶದ ಕಾರ್ಯ. ಅದರಿಂದ ವಿಶ್ವದ ನಾಯಕರು ಯುದ್ಧೋನ್ಮಾದವನ್ನು ತೊರೆದು ಅಹಿಂಸಾ ತತ್ವ ಪಾಲಿಸಬೇಕು. ಅಹಿಂಸೆ ಎಂದರೆ ದುರ್ಬಲರ ಆಯ್ಕೆಯಲ್ಲ ಅದು ಶಕ್ತಿಯ ಸಂಕೇತ ಎಂದು ಗಾಂಧಿಯವರು ಹೇಳುತ್ತಿದ್ದರು’ ಎಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಆಂಜನೇಯ, ಉಪನ್ಯಾಸಕರಾದ ಇಮ್ರಾನ್ ಖಾಜಿ, ಬಾಬುರಾಯ, ಬಾಲಪ್ಪ ಕಟ್ಟೇಲ್, ಎಸ್.ಎಸ್.ನಾಯಕ, ಮರಿಯಪ್ಪ ನಾಟೇಕರ, ವಿದ್ಯಾರ್ಥಿಗಳಾದ ಗಾಯತ್ರಿ, ನಿಜಗುಣ, ಮಹೇಶ್ವರಿ ಮಾತನಾಡಿದರು.
ಪ್ರಾಂಶುಪಾಲ ಪುರುಷೋತ್ತಮ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಜ್ಞಾನಮಿತ್ರ ಸ್ವಾಗತಿಸಿ, ಪೀರಪ್ಪ ವಂದಿಸಿ, ಭೀಮರಾಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.