ADVERTISEMENT

ಮುಕ್ತಿ ಪಡೆಯಲು ಶ್ರವಣ ಭಕ್ತಿ ಸಾಧನ

ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 10:41 IST
Last Updated 17 ಡಿಸೆಂಬರ್ 2019, 10:41 IST
ಕೆಂಭಾವಿ ಸಮೀಪದ ಮುದನೂರ ಗ್ರಾಮದ ಕಂಠಿ ಹನುಮಾನ ದೇವರ 21 ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಧರ್ಮಸಭೆಯನ್ನು ಡಾ.ಚಂದ್ರಶೇಖರ ಶಿವಾಚಾರ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಕೆಂಭಾವಿ ಸಮೀಪದ ಮುದನೂರ ಗ್ರಾಮದ ಕಂಠಿ ಹನುಮಾನ ದೇವರ 21 ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಧರ್ಮಸಭೆಯನ್ನು ಡಾ.ಚಂದ್ರಶೇಖರ ಶಿವಾಚಾರ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು   

ಕೆಂಭಾವಿ: ಭೂಮಿಯ ಮೇಲೆ ಜನ್ಮತಾಳಿದ ಪ್ರತಿಯೊಬ್ಬ ಮನುಷ್ಯನ ಜೀವನದ ಅಂತಿಮ ಗುರು ಮುಕ್ತಿ ಆಗಿದೆ. ಈ ಮುಕ್ತಿ ಪಡೆಯಲು ಶ್ರವಣ ಭಕ್ತಿಯು ಅತ್ಯಂತ ಶ್ರೇಷ್ಠ ಸಾಧನವಾಗಿದೆ ಎಂದು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಪಟ್ಟಣ ಸಮೀಪದ ಮುದನೂರ ಗ್ರಾಮದ ಕಂಠಿ ಹನುಮಾನ ದೇವರ 21 ನೇ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿರುವ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಕ್ತಿಯ ಸಾಧನಗಳಲ್ಲಿ ಭಕ್ತಿಯು ಪ್ರಮುಖವಾಗಿದೆ. ಜನ್ಮ ತಾಳಿದ ಪ್ರತಿಯೊಬ್ಬ ಜೀವಿಗೆ 12 ನೇ ದಿನಕ್ಕೆ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ. ಅಂದು ಆ ಮಗುವಿಗೆ ಒಂದು ಅಂಕಿತನಾಮವನ್ನು ಕೊಡಲಾಗುವುದು. ಪ್ರತಿಯೊಂದು ಮಗುವನ್ನು ಉದ್ದೇಶಿಸಿ ಅದೇ ನಾಮವನ್ನು ಬಳಸುತ್ತಾ ಹೋಗು ವುದರಿಂದ ಆ ಮಗು ಆ ನಾಮದ ಅಭಿಮಾನವನ್ನು ಮಾಡಿಕೊಳ್ಳುತ್ತ ಹೋಗುತ್ತದೆ ಎಂದು ಹೇಳಿದರು.

ADVERTISEMENT

‘ತನ್ನ ಶರೀರದ ಮೇಲೆ ನಾನೆಂಬ ಅಹಂಕಾರವನ್ನು ಶರೀರಕ್ಕೆ ಸಂಬಂಧಿಸಿದ ಹೊಲ, ವಸ್ತು ವಾಹನಾದಿಗಳ ಮೇಲೆ ನನ್ನದೆಂಬ ಮಮಕಾರವನ್ನು ತಾಳುತ್ತ ಹೋಗುವುದು ಎಂದ ಅವರು, ಅಹಂಕಾರ ಮಮಕಾರಗಳು ಜೀವಿಗಳ ಬಂಧನಕ್ಕೆ ಕಾರಣವಾಗುವವು, ಅನೇಕ ಜನ್ಮಗಳಿಂದ ಬಂದಿರುವ ಅನಾದಿ ಅಹಂಕಾರ ಮಮಕಾರಗಳು ಜೀವಿಗಳ ಬಂಧನಕ್ಕೆ ಕಾರಣವಾಗುವವು ಎಂದು ಹೇಳಿದರು.

ಅನೇಕ ಜನ್ಮಗಳಿಂದ ಬಂದಿರುವ ಅನಾದಿ ಅಹಂಕಾರ ಮಮಕಾರಗಳು ತೊಲಗಬೇಕಾದರೆ ಗುರುವಿನ ಉಪದೇಶವೇ ಮುಖ್ಯವಾಗಿದ್ದು, ಸದ್ಗುರು ಉಪದೇಶದ ಮೂಲಕ ಮನುಷ್ಯನ ಮನಸ್ಸಿನಲ್ಲಿ ಬಂದಿರುವ ನಾನು ಮತ್ತು ನನ್ನದೆಂಬ ತಪ್ಪು ತಿಳುವಳಿಕೆ ದೂರ ಮಾಡುತ್ತಾರೆ. ಹೀಗೆ ಗುರುವಿನ ಉಪದೇಶದ ಮೂಲಕ ಶ್ರವಣವೇ ಮುಕ್ತಿ ಸಾಧನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್. ಸಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿ ದರು.ಸಂಗನಗೌಡ ಪಾಟೀಲ ಕಂಠಿ ಮಠದ ಮಹತ್ವದ ಕುರಿತು ವಿವರಿಸಿದರು.

ಕಂಠಿ ಮಠದ ಮಠಾಧ್ಯಕ್ಷ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಬೃಹ್ನಮಠದ ಗಿರಿಧರ ಶಿವಾಚಾರ್ಯ, ಕಾಂತೇಶ್ವರ ಮಠದ ಚನ್ನಬಸವ ಶಿವಾಚಾರ್ಯ, ಯಡ್ರಾಮಿ ಹಿರೇಮಠದ ಗುರುಶಾಂತ ಮೂರ್ತಿ ಶಿವಾಚಾರ್ಯ, ಭೀಮರಾಯ ಸಾಹು ಹೊಟ್ಟಿ, ಪ್ರಭುಗೌಡ ಅರನಾಳ, ಚೆನ್ನಪ್ಪಗೌಡ ಬೆಕಿನಾಳ, ಬಸವರಾಜ ಹೊಸಮನಿ, ಬಾಬುಗೌಡ ಪಾಟೀಲ, ಸಿದ್ಧಣ್ಣ ಹೊಟ್ಟಿ, ಮಾಜಿ ಜಿ.ಪಂ ಸದಸ್ಯ ಎಚ್.ಸಿ. ಪಾಟೀಲ, ಸಿಪಿಐ ವೀರಭದ್ರಯ್ಯಸ್ವಾಮಿ ಕಾಚಾಪುರ, ಪಿಎಸ್ಐ ಸುದರ್ಶನರೆಡ್ಡಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಇದ್ದರು.

ಶರಣುಕುಮಾರ ಯಾಳಗಿ, ಯಮನೇಶ ಯಾಳಗಿ ಹಾಗೂ ಈಶ್ವರ ಬಡಿಗೇರ್ ಅವರಿಂದ ಸಂಗೀತ ಸೇವೆ ನೇರವೇರಿತು. ಮಡಿವಾಳಯ್ಯ ಶಾಸ್ತ್ರಿಗಳು ನಿರೂಪಿಸಿದರು, ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.