ಸೈದಾಪುರ: ಯೇಸು ಕ್ರಿಸ್ತನು ವಿಶ್ವಕ್ಕೆ ಶಾಂತಿ ಮತ್ತು ಸತ್ಯದ ಸಂದೇಶವನ್ನು ಸಾರಿ, ಜನರ ಮಧ್ಯ ಸಹಬಾಳ್ವೆಯನ್ನು ಮೂಡಿಸಲು ಜನಿಸಿ ಬಂದ ಎಂದು ಮೆಥೋಡಿಸ್ಟ ಚರ್ಚನ ಸಭಾಪಾಲಕ ಎಮ್.ಕೆ ರಾಜು ಹೇಳಿದರು.
ಪಟ್ಟಣದ ಮೆಥೋಡಿಸ್ಟ ಚರ್ಚನಲ್ಲಿ ಕ್ರಿಸ್ಮಸ್ ಪ್ರಯುಕ್ತವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚರ್ಚ್ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರತಿ ವರ್ಷವು ಕೂಡ ಡಿ.25ರಂದು ಯೇಸು ಹುಟ್ಟಿದ ದಿನದ ಸವಿನೆನಪಿಗಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯು ಅತ್ಯಂತ ಸರಳವಾಗಿ ಚರ್ಚ್ ಒಳಗಡೆ ಗೋದಲಿಯನ್ನು ನಿರ್ಮಾಣ ಮಾಡಿ ಅದರಲ್ಲಿ ಯೇಸುವಿನ ಜನನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಗೊಂಬೆಗಳನ್ನು ಇಟ್ಟು ಪ್ರಾರ್ಥಿಸಲಾಗುತ್ತದೆ.
ಕೊರೊನಾ ಜನರನ್ನು ಭಯ ಮುಕ್ತರಾಗಿ ಜೀವಿಸಲು ಬಿಡುತ್ತಿಲ್ಲ. ಕಳೆದ ವರ್ಷವು ವಿಜೃಂಭಣೆಯಿಂದ ಆಚರಿಸಲು ಸಾದ್ಯವಾಗಿರಲಿಲ್ಲ. ಆದರೆ ಹಿರಿಯರ ಸಂಪ್ರದಾಯದಂತೆ ದೇವರ ಆರ್ಶೀವಾದವನ್ನು ಪಡೆದುಕೊಳ್ಳುವುದು ಮರೆಯುವಂತಿಲ್ಲ. ಆದ್ದರಿಂದ ಈ ಬಾರಿಯು ಅತ್ಯಂತ ಸರಳವಾಗಿ ಕ್ರೈಸ್ತರು ತಮ್ಮ ಮನೆಗಳನ್ನು ದೀಪಗಳಿಂದ ಸಿಂಗಾರಗೊಳಿಸಿದ್ದರು.
ಮನೆಗಳ ಮೇಲೆ ನಕ್ಷತ್ರಕಾರದ ಮಾದರಿಗಳ ದೀಪಗಳನ್ನು ಹಾಕಿ ಸಂಭ್ರಮಿಸಿದರು. ಅದರಂತೆ ಚರ್ಚನಲ್ಲಿಯೂ ಸಹ ಬಣ್ಣ ಬಣ್ಣದ ಪರಾರಿಗಳನ್ನು, ಬಲೂನ್ಗಳನ್ನು ಕಟ್ಟಿ ಸಿಂಗರಿಸಿದ್ದರು. ನಂತರ ಯೇಸುವಿನ ಜೀವನ ಮತ್ತು ಜನ್ಮದಿನದ ಬಗ್ಗೆ ಸವಿಸ್ತಾರವಾಗಿ ಬೈಬಲನ್ನು ಪರಾಯಣ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಯೇಸುವಿನ ಸಂದೇಶವನ್ನು ಚರ್ಚ್ನ ಸಭಾಪಾಲಕರು ನೀಡಿದರು.
ಚರ್ಚನಲ್ಲಿ ಬೈಬಲ್ ಪರಾಯಣ ಮುಗಿದ ನಂತರ ಮನೆಗಳಲ್ಲಿ ಸಿಹಿ ಖಾದ್ಯಗಳನ್ನು ಮಾಡಿ ತಮ್ಮ ಗೆಳೆಯರಿಗೆ ಉಣಬಡಿಸಿದರು. ಭಾಸ್ಕರ ಬೆಳಗುಂದಿ, ರವಿ ಕುಮಾರ ಸೀಮೆನಾ, ಅನಿಲ ಕುಮಾರ ಬೆಳಗುಂದಿ, ಯೇಸುನಾಥ ಮೇಲಗಿರಿ, ಉಮೇಶ, ಜೋಸೆಫ್, ಯೇಸು, ಶ್ಯಾಮ, ಮಾಣಿಕಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.